ಕರೋನಾ ವೈರಸ್ ಜಾಗೃತಿ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ: ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನೆ

ಮಂಗಳೂರು, ಮಾ.9: ಕರೋನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸ್ಪಷ್ಪಪಡಿಸಬೇಕು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಸೋಮವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.
ಈ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದ ಭರತ್ ಶೆಟ್ಟಿ ಕರೋನಾ ವೈರಸ್ ಹಿಂದೆಯೂ ಇತ್ತು. ಆದರೆ ನೊಯಲ್ ಕರೋನಾ ವೈರಸ್ ಮೊದಲಬಾರಿಗೆ ಪತ್ತೆಯಾಗಿದೆ. ಆರು ಉಪಖಂಡಗಳಲ್ಲಿ ಅದು ಹರಡುತ್ತಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಭಾರತ ದೊಡ್ಡ ರಾಷ್ಟ್ರ. ಇಲ್ಲಿ ಕರೋನಾ ಹಬ್ಬಿದರೆ ಅದನ್ನು ನಿಭಾಯಿಸಲು ಏನು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಯಾವ ರೀತಿಯ ಪೂರ್ವ ತಯಾರಿ ಮಾಡಲಾಗಿದೆ ಎನ್ನುವುದನ್ನು ಸರಕಾರ ತಿಳಿಯಪಡಿಸಬೇಕು ಎಂದು ಒತ್ತಾಯಿಸಿದರು.
ಮಾಹಿತಿಯ ಕೊರತೆಯಿಂದ ಜನರು ಭಯಭೀತರಾಗಿ ಮುಖಗವಸು ಹಾಕಿಕೊಂಡು ತಿರುಗುತ್ತಿದ್ದಾರೆ. ಇದರಿಂದ ಆರೋಗ್ಯ ಕ್ಷೇತ್ರದ ಮುಂಚೂಣಿ ಸಿಬ್ಬಂದಿಗೆ ಮುಖಗವಸುಗಳ ಕೊರತೆ ಎದುರಾಗಬಹುದು. ಕರೋನಾ ಬಗ್ಗೆ ಗ್ರಾಪಂ ಮಟ್ಟದಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಶಾಸಕ ಡಾ.ಭರತ್ ಹೇಳಿದರು.
ಈವರೆಗೆ ರಾಷ್ಟ್ರದಲ್ಲಿ 39 ಮಂದಿಗೆ ಕರೋನಾ ತಗಲಿರುವುದು ದೃಢಪಟ್ಟಿದೆ. ರಾಜ್ಯ ಸರಕಾರದ ವತಿಯಿಂದ ಜಾಗೃತಿ, ಮಾಹಿತಿ ಪ್ರಸಾರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.







