ಮಾ.12ರಿಂದ ಎಲ್ವಿಟಿಯ ಸುತ್ತುಪೌಳಿ ಜೀರ್ಣೋದ್ಧಾರ
ಉಡುಪಿ, ಮಾ.10: ಉಡುಪಿ ತೆಂಕಪೇಟೆಯ ವಿ.ಟಿ.ರಸ್ತೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸುತ್ತು ಪೌಳಿ ಜೀರ್ಣೋದ್ಧಾರ ಮತ್ತು ಪರಿವಾರ ದೇವರುಗಳ ಪುನಃಪ್ರತಿಷ್ಠಾ ಮಹೋತ್ಸವವು ಮಾ.12ರಿಂದ 15ರವರೆಗೆ ನಡೆಯಲಿದೆ.
ದೇವಳದ ಗರ್ಭಗುಡಿ ಈಗಾಗಲೇ ಜೀರ್ಣೋದ್ಧಾರಗೊಂಡಿದ್ದು, 5 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ಜೀರ್ಣೋದ್ಧಾರಕ್ಕೆ ಮುಂದಾಗಿದ್ದೇವೆ ಎಂದು ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ, ಜೀರ್ಣೋ ದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ವಿಠಲದಾಸ ಶೆಣೈ ತಿಳಿಸಿದ್ದಾರೆ.
ಮಾ.12ರಂದು ಪ್ರಾರ್ಥನೆ, ಗುರುಗಣಪತಿ ಪೂಜನಾ, ಆದ್ಯ ಗಣಯಾಗ, ಕೂಪಶುದ್ಧಿ, ಮೃತಿಕಾ ಹರಣ, ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ, ಹೊರೆಕಾಣಿಕೆ ಮೆರವಣಿಗೆ, ಮಾ.13ರಂದು ಪುಣ್ಯಾಹ ವಾಚನ, ಮಾತೃಕಾ ಪೂಜನ, ನಾಂದಿ ಪೂಜನ, ಶ್ರೀದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ಯಜ್ಞ ಮಂಟಪದಲ್ಲಿ ಪ್ರಾಯಶ್ಚಿತ ಹೋಮ, ಗೋಪೂಜೆ, 14ರಂದು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಮಾ.15ರಂದು ಬೆಳಗ್ಗೆ 6:30ಕ್ಕೆ ಶ್ರೀಸಂಸ್ಥಾನ ಕಾಶೀಮಠಾಧೀಶ ಶ್ರೀಸಂಯ ಮೀಂದ್ರ ತೀರ್ಥ ಸ್ವಾಮೀಜಿ ಆಗಮಿಸಲಿರುವರು. ಬೆಳಗ್ಗೆ 9:35ಕ್ಕೆ ಜೀರ್ಣೋ ದ್ಧಾರಗೊಂಡ ನೂತನ ಗರ್ಭಗೃಹಗಳಲ್ಲಿ ಶ್ರೀಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನೆ ಶ್ರೀಗಳಿಂ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅನುವಂಶಿಕ ಟ್ರಸ್ಟಿ ಯು.ನಾರಾಯಣ ಪ್ರಭು, ಉಪಾಧ್ಯಕ್ಷ ಡಾ.ಯು.ಕೈಲಾಸನಾಥ ಶೆಣೈ, ಸಹ ಕಾರ್ಯದರ್ಶಿ ಯು.ಅಶೋಕ ಬಾಳಿಗಾ, ಸಲಹೆ ಸೌಕರ್ಯ ಸಮಿತಿಯ ಯು.ದೇವದಾಸ್ ಪೈ ಉಪಸ್ಥಿತರಿದ್ದರು.







