ಸಚಿವ ಸುಧಾಕರ್ ವಿರುದ್ಧ ಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಮಾ. 12: ‘ಅಂದಿನ ಸ್ಪೀಕರ್ ರಮೇಶ್ ಕುಮಾರ್ ತಮ್ಮ ವಿವೇಚನಾಧಿಕಾರ ಬಳಸಿ ನೀಡಿದ್ದ ಅನರ್ಹತೆಯ ತೀರ್ಪನ್ನು ಸಚಿವ ಸುಧಾಕರ್ ‘ರಾಜಕೀಯ ಷಡ್ಯಂತ್ರ’ ಎಂದು ಕರೆದಿರುವುದು ಸದನ ಹಾಗೂ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದಂತೆ. ಇದರಿಂದ ಸ್ಪಷ್ಟವಾಗಿ ಸದನದ ಹಕ್ಕುಚ್ಯುತಿಯಾಗಿದೆ. ಹೀಗಾಗಿ ಸಚಿವ ಸುಧಾಕರ್ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಮತ್ತು ಸುಧಾಕರ್ ನಡುವಿನ ವಾಕ್ಸಮರಕ್ಕೆ ಸಂಬಂಧಿಸಿದ ‘ಹಕ್ಕುಚ್ಯುತಿ’ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ನಿಯಮ 363ರ ಅಡಿ ವಿಷಯ ಪ್ರಸ್ತಾಪಿಸಿದ ಅವರು, ‘ಸಚಿವ ಡಾ.ಸುಧಾಕರ್ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಅನರ್ಹತೆ ತೀರ್ಪಿನ ಬಗ್ಗೆ ಮಾತನಾಡುತ್ತಾ ತಮಗೆ ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ. ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿದ್ದರು ಎಂದು ಹೇಳಿದ್ದಾರೆ. ಈ ಹೇಳಿಕೆ ಸಂವಿಧಾನಾತ್ಮಕ ಪೀಠಕ್ಕೆ ತೋರಿದ ಅಗೌರವ’ ಎಂದು ವಿಶ್ಲೇಷಿಸಿದರು.
‘ಸ್ಪೀಕರ್ ತಮ್ಮ ವಿವೇಚನಾಧಿಕಾರ ಬಳಸಿ ಶಾಸಕರ ರಾಜೀನಾಮೆ ಸ್ವೀಕರಿಸುವ ಮತ್ತು ತಿರಸ್ಕರಿಸುವ ಅಧಿಕಾರ ಸಂವಿಧಾನವೇ ನೀಡಿದೆ. ರಾಜೀನಾಮೆ ನೀಡಿದ ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡದಿರುವುದು ಸ್ಪೀಕರ್ ವಿವೇಚನೆಗೆ ಬಂದಲ್ಲಿ ಅಂತಹವರನ್ನು ಅನರ್ಹಗೊಳಿಸುವ ಅಧಿಕಾರವೂ ಅವರಿಗಿದೆ’ ಎಂದು ಹೇಳಿದರು.
ವಾಗ್ವಾದ: ‘ಹಕ್ಕುಚ್ಯುತಿ’ ವಿಚಾರದ ಪ್ರಸ್ತಾಪದ ಸಂದರ್ಭದಲ್ಲಿ ಪದೇ ಪದೇ ವಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷ ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆದ ಪ್ರಸಂಗವು ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಕ್ಕುಚ್ಯುತಿ ಪ್ರಸ್ತಾಪದ ವೇಳೆ, ಸಚಿವ ಸುಧಾಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.
17 ಶಾಸಕರ ಅನರ್ಹತೆ ಸಂಬಂಧಿಸಿದ ಸುಪ್ರೀಂ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಸಂವಿಧಾನ ಕುರಿತು ಚರ್ಚೆ ವೇಳೆ ಸ್ಪೀಕರ್ ಪೀಠದಿಂದ ರಮೇಶ್ ಕುಮಾರ್ ನೀಡಿದ ಆದೇಶವನ್ನು ಉಲ್ಲೇಖ ಮಾಡುವ ಅಗತ್ಯವೇ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ನಮಗೆ ಅನ್ಯಾಯವಾಗಿದೆ. ಆ ಪೀಠದಲ್ಲಿ ಕೂತ ಸನ್ಮಾನ್ಯರು ಏನೇನು ಮಾತನಾಡಿದ್ದಾರೆಂದು ಗೊತ್ತಿದೆ ಎಂದರು. ಈ ವೇಳೆ ಎದ್ದುನಿಂತ ರಮೇಶ್ ಕುಮಾರ್ ‘ನಾನು ಇಲ್ಲಿ ಹೆಣದ ರೀತಿ ಕೂತಿರಲು ಆಗುವುದಿಲ್ಲ. ಪೀಠದಲ್ಲಿ ಕೂತು ನಾನು ಆ ರೀತಿ ಮಾತನಾಡಿದ್ದರೆ ಕೂಡಲೇ ಕಡತ ತರಿಸಿ ಪರಿಶೀಲಿಸಿ ಎಂದು ಆಗ್ರಹಿಸಿದರು.
ಒಂದು ಹಂತದಲ್ಲಿ ಕಾನೂನು ಸಚಿವ ಮಾಧುಸ್ವಾಮಿ, ಕ್ರಿಯಾಲೋಪವೆತ್ತಿ, ಹಕ್ಕುಚ್ಯುತಿ ವಿಚಾರಕ್ಕೆ ಸೀಮಿತವಾಗಿ ವಿಪಕ್ಷ ನಾಯಕರು ಮಾತನಾಡಬೇಕು. ಅದು ಬಿಟ್ಟು ಶಾಸಕ ಭಾಷಣ ಪೂರ್ಣ ಮಾಡಲು ಅವಕಾಶ ನೀಡದೆ ಹಕ್ಕುಚ್ಯುತಿ ಮಂಡನೆ ಸರಿಯಲ್ಲ ಎಂದು ಆಕ್ಷೇಪಿಸಿದರು.







