ಕೊರೋನಾ ವೈರಸ್ ಭೀತಿ: ಸರ್ಕಾರದ ಆದೇಶ ಪಾಲಿಸಲು ಕೊಡಗು ಜಿಲ್ಲಾಧಿಕಾರಿ ಮನವಿ

ಮಡಿಕೇರಿ, ಮಾ.14 : ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸರ್ಕಾರದ ಆದೇಶ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಗೆ ಆಗಮಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರನ್ನು ಭಾರತೀಯರು (ಯಾವುದೇ ದೇಶಕ್ಕೆ ಭೇಟಿ ನೀಡಿರಲಿ) ಹಾಗೂ ವಿದೇಶಿಯರು ಕರ್ನಾಟಕಕ್ಕೆ ಆಗಮಿಸುವಾಗ ಅವರಿಗೆ ರೋಗ ಲಕ್ಷಣ ಇಲ್ಲದಿದ್ದರೂ (asymptomatic) ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸುವುದು.
ಕೊಡಗು ಜಿಲ್ಲೆಯಾದ್ಯಂತ ಮಾರ್ಚ್ 14 ರಿಂದ ಮುಂದಿನ ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರಗಳು, ಮಾಲ್ಗಳು, ನಾಟಕಗಳು, ರಂಗಮಂದಿರಗಳು, ಪಬ್ಗಳು, ನೈಟ್ಕ್ಲಬ್ಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ಕ್ಲಬ್ಗಳು, ಮ್ಯಾರಥಾನ್, ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾ ಕೂಟಗಳಾದ ಕ್ರಿಕೆಟ್, ಫುಟ್ಬಾಲ್, ಹಾಕಿ ಮತ್ತು ಇತರೆ ಕ್ರೀಡೆಗಳಿಗೆ ನಿರ್ಭಂಧವನ್ನು ಹೇರಲಾಗಿದೆ.
ಜೊತೆಗೆ ಹೆಚ್ಚಾಗಿ ಜನರು ಸೇರುವಂತಹ ಮದುವೆ ಕಾರ್ಯಕ್ರಮಗಳು ನಡೆಸದಿರುವುದು. ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಜಾತ್ರೆಗಳಿಗೆ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವುದು. ಹೆಚ್ಚು ಜನರು ಬಳಸುವ ಸ್ವಿಮ್ಮಂಗ್ ಪೂಲ್ಸ್, ಜಿಮ್ ಮುಂತಾದದವುಗಳನ್ನು ಮುಚ್ಚುವುದು. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಅಂಗನವಾಡಿ ಮಕ್ಕಳಿಗೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರ್ಚ್ 14 ರಿಂದ ಮುಂದಿನ ಒಂದು ವಾರದ ಮಟ್ಟಿಗೆ (ಪರೀಕ್ಷೆಗಳನ್ನು ಹೊರತುಪಡಿಸಿ) ರಜೆ ನೀಡಲಾಗಿದೆ.
ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೋಚಿಂಗ್ ಸೆಂಟರ್ಗಳನ್ನು ಮುಚ್ಚುವುದು. ನಿಗಧಿಪಡಿಸಿದ ಪರೀಕ್ಷೆಗಳನ್ನು ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ನಡೆಸುವುದು. ಹೆಚ್ಚಾಗಿ ವಿದೇಶಗಳಿಗೆ ಪ್ರಯಾಣಿಸುವ ಐ.ಟಿ. ಬಿ.ಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಲು ಸಂಸ್ಥೆಗಳು ಪರಿಗಣಿಸುವುದು.
ಖಾಸಗಿ ವೈದ್ಯರುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ನಸಿಂಗ್ ಹೋಂಗಳು ಫೆಬ್ರವರಿ 21 ರ ನಂತರ ವಿದೇಶದಿಂದ ಬಂದು ರೋಗ ಲಕ್ಷಣಗಳಿರುವ ರೋಗಿಗಳು ಇದ್ದಲ್ಲಿ ತಡ ಮಾಡದೆ ಜಿಲ್ಲಾ ಆರೋಗ್ಯಾಧಿಕಾರಿಗೆ ಫೋನ್/ ಫ್ಯಾಕ್ಸ್/ ವಾಟ್ಸಪ್/ 104 ಸಹಾಯವಾಣಿ ಮೂಲಕ ತಿಳಿಸಬೇಕು.
ಸರ್ಕಾರ/ ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶ, ನಿರ್ದೇಶನ, ಮುನ್ನಚ್ಚರಿಕಾ ಕ್ರಮಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು, ಉಲ್ಲಂಘನೆಯು ಉಲ್ಲೇಖ(4)ರ ಅಧಿಸೂಚನೆಯನ್ವಯ ಭಾರತೀಯ ದಂಡ ಸಂಹಿತೆ 1860ರ ಕಲಂ 188 ರಡಿ ದಂಡನೀಯವಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.







