ಬೀದಿ ಬದಿ ತುಂಡರಿಸಿದ ಹಣ್ಣು ಹಂಪಲು ಮಾರಾಟ ತಡೆಗೆ ಮನವಿ
ಮಂಗಳೂರು, ಮಾ.15: ನಗರ ಮತ್ತು ಹೊರವಲಯದ ಹಲವು ಕಡೆಯ ಬೀದಿ ಬದಿಗಳಲ್ಲಿ ಹಣ್ಣು ಹಂಪಲುಗಳನ್ನು ತುಂಡರಿಸಿ ಮಾರಾಟ ಮಾಡಲಾಗುತ್ತದೆ. ಇದರಿಂದ ಮಾನವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಇದರ ಮಾರಾಟವನ್ನು ತಡೆ ಹಿಡಿಯುವಂತೆ ಪರಿಸರವಾದಿ ಬಿಎಸ್ ಹಸನಬ್ಬ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಯಾವುದೇ ಸುರಕ್ಷತೆಯಿಲ್ಲದೆ ಹಣ್ಣು ಹಂಪಲನ್ನು ತುಂಡರಿಸಿ ಬೀದಿಬದಿಯಲ್ಲೇ ಮಾರಾಟಕ್ಕಿಡುವುದರಿಂದ ಹಣ್ಣು ಹಂಪಲಿನ ಮೇಲೆ ಧೂಳಿನ ಕಣ ಆವರಿಸುತ್ತದೆ. ಇದೇ ಹಣ್ಣು ಹಂಪಲುಗಳನ್ನು ಮಕ್ಕಳ ಸಹಿತ ಎಲ್ಲರೂ ಸೆಖೆಗಾಲದಲ್ಲಿ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಮೊದಲೇ ಸಾಂಕ್ರಾಮಿಕ ರೋಗಗಳಿಂದ ಜನರು ತತ್ತರಿಸಿದ್ದು, ಹೀಗೆ ಹಣ್ಣು ಹಂಪಲುಗಳ ಮಾರಾಟಕ್ಕೆ ಕಡಿವಾಣ ಹಾಕುವ ಮೂಲಕ ಸ್ವಸ್ಥ ಸಮಾಜ ಸೃಷ್ಟಿಗೆ ಜಿಲ್ಲಾಡಳಿತ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
Next Story





