ಇರುವೈಲಿನಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ : 16 ಮಂದಿ ವಿರುದ್ಧ ಪ್ರಕರಣ ದಾಖಲು
ಪೊಲೀಸ್ ಠಾಣೆಯ ಎದುರು ಪ್ರತಿಭಟನೆ
ಮೂಡುಬಿದಿರೆ: ಇಲ್ಲಿಗೆ ಸಮೀಪದ ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರೋತ್ಸವದ ಸಂದರ್ಭ ದೈವದ ಕೋಲ ನಡೆಯುತ್ತಿರುವಾಗಲೇ ತಂಡವೊಂದು ಇನ್ನೊಂಡು ತಂಡದಲ್ಲಿದ್ದ ಕೆಲವರಿಗೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಅದೇ ತಂಡ ವಾಹನ ಅಟ್ಟಗಟ್ಟಿ ಮತ್ತೊಮ್ಮೆ ಹಲ್ಲೆ ನಡೆಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೇವಸ್ಥಾನದ ಒಂದು ವರ್ಗದ ಭಕ್ತರ ಗುಂಪು ರವಿವಾರ ಪೊಲೀಸ್ ಠಾಣೆ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಧರಣಿ ನಿರತರ ಪರವಾಗಿ ಪ್ರಸಾದ್ ಶೆಟ್ಟಿ ಎಸಿಪಿ ಅವರಿಗೆ ಘಟನೆಯ ಮಾಹಿತಿ ನೀಡಿದರು. ಎಸಿಪಿ ಭರವಸೆ ಬಳಿಕ ಧರಣಿ ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಪೊಲೀಸರಿಂದ ಪ್ರತಿಭಟನಾಕಾರರಿಗೆ ಮಜ್ಜಿಗೆ : ಪೊಲೀಸ್ ಠಾಣೆ ಎದುರು ಧರಣಿ ಕುಳಿತ ಪ್ರತಿಭಟನಾಕಾರರಿಗೆ ಪೊಲೀಸರು ಪ್ರತಿಭಟನೆ ಮುಗಿದ ಬಳಿಕ ಮಜ್ಜಿಗೆ ಕೊಟ್ಟು ಧಣಿವನ್ನು ನಿವಾರಿಸಿದರು.
ಹದಿನಾರು ಮಂದಿ ವಿರುದ್ಧ ಕೇಸು ದಾಖಲು: ಇರುವೈಲು ದೇವಸ್ಥಾನ ತದನಂತರ ಮಾಸ್ತಿಕಟ್ಟೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯ ತಲಾ 8 ಮಂದಿ ವಿರುದ್ಧ ದೂರು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.