ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ: ಕುಂದಾಪುರ ಪಂಚಾಯತ್ರಾಜ್ ಒಕ್ಕೂಟ ತೀವ್ರ ವಿರೋಧ

ಕುಂದಾಪುರ, ಮಾ.16: ಗ್ರಾಮ ಸರಕಾರವನ್ನು ಸ್ಥಳೀಯ ಸ್ವಯಂ ಸರಕಾರ ವಾಗಿ ರೂಪಿಸುವ ಮೂಲಕ ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ಗ್ರಾಮ ಪಂಚಾಯತ್ ಮತ್ತು ಗ್ರಾಮಸಭೆಯ ಅಧಿಕಾರ ವನ್ನು ಕಿತ್ತುಕೊಂಡು ಇಡೀ ಪಂಚಾಯತ್ರಾಜ್ ವ್ಯವಸ್ಥೆಯನ್ನು ದುರ್ಬಲ ಗೊಳಿಸಲು ಹೊರಟಿರುವ ಕರ್ನಾಟಕ ರಾಜ್ಯ ಸರಕಾರದ ಎಲ್ಲಾ ನಡೆಗಳನ್ನು ಕುಂದಾಪುರ ತಾಲೂಕು ಪಂಚಾಯತ್ರಾಜ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಪಂಚಾಯತ್ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.
ತ್ರಿಸ್ಥರ ಪಂಚಾಯತ್ಗಳಿಗೆ ಗ್ರಾಮಸ್ವರಾಜ್ ಹಾಗೂ ಪಂಚಾಯತ್ ಕಾಯ್ದೆಯ ಪ್ರಕಾರ ನಿಗದಿ ಮಾಡಿದ್ದ ಎರಡು ಅವಧಿಗೆ (10 ವರ್ಷಗಳಿಗೆ) ಇರುವ ಮೀಸಲಾತಿಯನ್ನು ಒಂದೇ ಅವಧಿಗೆ (5 ವರ್ಷಗಳಿಗೆ) ಸಡಿಲ ಮಾಡಲು ಮತ್ತು ಇದರ ಕುರಿತಾಗಿರುವ ನಿಯಮಗಳನ್ನು ತೆಗೆದು ಹಾಕುವುದು ಹಾಗೂ ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅಧಿಕಾರವನ್ನು 5 ವರ್ಷದ ಬದಲಿಗೆ 30 ತಿಂಗಳ ಅವಧಿ ನಿಗದಿ ಪಡಿಸುವುದು ಸೇರಿದಂತೆ ಸುಮಾರು 20 ಅಂಶಗಳನ್ನು ಒಳಗೊಂಡಂತೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರಕಾರದ ನಡೆಯ ಕುರಿತು ಚರ್ಚಿಸಲು ಕುಂದಾಪುರ ತಾಲೂಕುಪಂಚಾಯತ್ ರಾಜ್ ಒಕ್ಕೂಟವು ಇಂದು ಕುಂದಾಪುರ ತಾಪಂ ಸಭಾಂಗಣದಲ್ಲಿ ಸಭೆ ನಡೆಸಿತು.
ಈಗ ಇರುವ ಗ್ರಾಮ ಸ್ವರಾಜ್ ಕಾಯ್ದೆ ಉತ್ತಮವಾದ ಕಾಯ್ದೆಯಾಗಿದ್ದು, ಗ್ರಾಮ ಸ್ವರಾಜ್ ಸ್ಥಾಪನೆಗೆ ಪೂರಕವಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಈ ಕಾಯ್ದೆಯ ತಿದ್ದುಪಡಿ ಸಮಯದಲ್ಲಿ ಕುಂದಾಪುರ ಪಂಚಾಯತ್ ರಾಜ್ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸಕ್ರಿಯವಾಗಿ ತೊಡಗಿಸಿಕೊಂಡು ತನ್ನದೇ ಆದ ಕೊಡುಗೆಯನ್ನು ನೀಡಿದೆ.
ರಾಜ್ಯದ ಕೆಲವು ಗ್ರಾಪಂಗಳಲ್ಲಿ ನಡೆದ ಅಕ್ರಮವನ್ನು ಆಧಾರವಾಗಿ ಟ್ಟುಕೊಂಡು ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿರುವ ಗ್ರಾಮಸಭೆಯ ಅಧಿಕಾರ ಗಳನ್ನು ಕಿತ್ತುಕೊಳ್ಳುವುದು ಈ ಸಮಸ್ಯೆಗೆ ಪರಿಹಾರವಲ್ಲ. ಅಕ್ರಮ ನಡೆದಿರುವ ಪಂಚಾಯತ್ಗಳಲ್ಲಿ ಸೂಕ್ತ ತನಿಖೆಯ ಮೂಲಕ ಅದನ್ನು ತಡೆಯಬೇಕೇ ಹೊರತು ಕಾಯ್ದೆ ತಿದ್ದುಪಡಿಯ ಮೂಲಕ ರಾಜ್ಯದ ಎಲ್ಲಾ ಗ್ರಾಪಂಗಳ ಗ್ರಾಮ ಸಭೆಯ ಹಕ್ಕನ್ನು ಕಸಿದುಕೊಂಡು ಕಾಯ್ದೆಯನ್ನು ದುರ್ಬಲಗೊಳಿಸುವುದು ಸರಿಯಲ್ಲ ಎಂದು ಉದಯಕುಮಾರ್ ನುಡಿದರು.
ಒಕ್ಕೂಟದ ಗೌರವಾಧ್ಯಕ್ಷರಾದ ಜನಾರ್ಧನ ಮರವಂತೆ ಮಾತನಾಡಿ, ಪಂಚಾಯತ್ರಾಜ್ ಕಾಯ್ದೆಗೆ ತಿದ್ದುಪಡಿಗಳನ್ನು ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕುರಿತು ಎಲ್ಲಾ ಶಾಸಕರು ಪಕ್ಷಭೇದ ಮರೆತು ಮಾತನಾಡಬೇಕು. ಶಾಸಕರು ಹಾಗೂ ಅಧಿಕಾರಿಗಳ ಹಂತದಲ್ಲಿ ಆಗುತ್ತಿರುವ ಬದಲಾವಣೆ ಇದಾಗಿದ್ದು, ನಾವು ಮಾಡುವ ಪ್ರತಿಭಟನೆಯಿಂದ ಇದನ್ನು ನಿಲ್ಲಿಸಿಯೇ ಬಿಡುತ್ತೇವೆ ಎಂದು ನಂಬುವ ಸ್ಥಿತಿಯಿಲ್ಲ. ಆದರೆ ಇದನ್ನು ತಡೆಯುವ ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು ಎಂದರು.
ಪ್ರಥಮ ಹಂತದಲ್ಲಿ ಕುಂದಾಪುರದ ಎಲ್ಲಾ ಗ್ರಾಪಂಗಳು ಈ ತಿದ್ದುಪಡಿಗಳನ್ನು ವಿರೋಧಿಸಿ ನಿರ್ಣಯವನ್ನು ಮಾಡಿ ಸರಕಾರಕ್ಕೆ ಕಳುಹಿಸುವುದು ಹಾಗೂ ಮುಖ್ಯಮಂತ್ರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾ ಸಚಿವರನ್ನು ಭೇಟಿಯಾಗಿ ಈ ತಿದ್ದುಪಡಿಗಳನ್ನು ತರದಂತೆ ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಕ್ಷರು ಹಾಗೂ ಸದಸ್ಯರು, ಗ್ರಾಮಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯದ ಪ್ರತಿನಿಧಿಗಳು ಭಾಗವಹಿಸಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಪಡುವರಿ ಸ್ವಾಗತಿಸಿ ವಂದಿಸಿದರು.







