ಮರಳು ದಿಬ್ಬ ತೆರವು: ಅರ್ಹ ಪರವಾನಿಗೆದಾರರಿಂದ ಅರ್ಜಿ ಆಹ್ವಾನ
ಉಡುಪಿ, ಮಾ.16: ಉಡುಪಿ ಜಿಲ್ಲೆಯಲ್ಲಿರುವ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಪ್ರದೇಶದ ಸ್ವರ್ಣಾ ನದಿ ಪಾತ್ರದ ಆರು, ಸೀತಾ ನದಿ ಪಾತ್ರ ಮೂರು ಹಾಗೂ ಪಾಪನಾಶಿನಿ ನದಿ ಪಾತ್ರದ ಒಂದು ಮರಳು ದಿಬ್ಬಗಳಲ್ಲಿ ಒಟ್ಟು 7,13,090 ಮೆಟ್ರಿಕ್ ಟನ್ ಮರಳನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್ಸಿಝಡ್ಎಂಎ)ದಿಂದ ಕರಾವಳಿ ನಿಯಂತ್ರಣ ವಲಯ ನಿರಾಪೇಕ್ಷಣಾ ಪತ್ರ (ಕ್ಲಿಯರೆನ್ಸ್) ದೊರೆತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ 7 ಸದಸ್ಯರ ಮರಳು ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಜಗದೀಶ್ ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ 7 ಸದಸ್ಯರ ಸಮಿತಿ ಸಭೆಯಲ್ಲಿ ಸಾಂಪ್ರದಾಯಿಕ ಮರಳು ಪರವಾನಿಗೆದಾರರಿಗೆ ಈ ಮರಳು ದಿಬ್ಬ ಗಳನ್ನು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆ ನೀಡಲು ತೀರ್ಮಾನಿಸಲಾಗಿದೆ.
ಅದರಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಕಟಣಾ ಫಲಕ ದಲ್ಲಿ ಮರಳು ದಿಬ್ಬಗಳ ವಿವರಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. 2019ರ ಸೆಪ್ಟಂಬರ್17 ಹಾಗೂ ಸೆ.30ರಂದು ನಡೆದ ಜಿಲ್ಲಾ 7ಸದಸ್ಯರ ಮರಳು ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ, ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆ ದಾರರು ಮರಳು ದಿಬ್ಬಗಳಿಗೆ ಸಂಬಂಧಿಸಿದಂತೆ ಪ್ರಥಮ ಮತ್ತು ದ್ವಿತೀಯ ಆದ್ಯತೆಗಳನ್ನು ಸ್ಪಷ್ಟವಾಗಿ ನಮೂದಿಸಿ ಇದೇ ಮಾ.31ರ ಸಂಜೆ 5:00ಗಂಟೆ ಯೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು ಹಿರಿಯ ಭೂವಿಜ್ಞಾನಿಗಳ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿಗೆ ಸಲ್ಲಿಸಲು ಸೂಚಿಸಲಾಗಿದೆ. ನಿಗದಿತ ದಿನ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದೂರವಾಣಿ ಸಂಖ್ಯೆ: 0820-2572333ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







