ಮಂಗಳೂರು : ವಿಮಾನಯಾನ ಸೇವೆಯಲ್ಲಿ ವ್ಯತ್ಯಯ
ಕೊರೋನ ಭೀತಿ

ಮಂಗಳೂರು, ಮಾ.17: ವಿಶ್ವಾದ್ಯಂತ ಹರಡಿರುವ ಕೊರೋನ ಸೋಂಕು ಭಾರತದಲ್ಲೂ ಭೀತಿ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುವ ಹಲವು ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹರೇನ್- ಕುವೈತ್- ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಐಎಕ್ಸ್ 889/ 890 ವಿಮಾನ ಸೇವೆಯನ್ನು ಮಾ.31ರವರೆಗೆ ಸ್ಥಗಿತಗೊಳಿಸಲಾಗಿದೆ.
ಮಂಗಳೂರಿನಿಂದ ದಮಾಮ್ಗೆ ತೆರಳುವ ಐಎಕ್ಸ್ 885/ 886 ವಿಮಾನ ಹಾಗೂ ದೋಹಾಗೆ ಪ್ರಯಾಣ ಬೆಳೆಸುವ ಐಎಕ್ಸ್ 821/ 822 ವಿಮಾನಗಳ ಸೇವೆಯನ್ನು ಮಾ.28ರವರೆಗೆ ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮಂಗಳೂರು ವಿಭಾಗದ ಅಧಿಕಾರಿ ಸುನೀಲ್ ಭಟ್, ಭಾರತ ಸರಕಾರದ ಸೂಚನೆಯಂತೆ ವಿವಿಧೆಡೆ ವಿಮಾನಯಾವ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಹರೈನ್, ಕುವೈತ್, ಕತಾರ್, ಸೌದಿ ಅರೇಬಿಯಾಗೆ ತೆರಳುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನ ಸೇವೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ದುಬೈ, ಅಬುಧಾಬಿ, ಮಸ್ಕತ್ ದೇಶಗಳಿಗೆ ಸಂಸ್ಥೆಯ ವಿಮಾನ ಸೇವೆ ಎಂದಿನಂತೆಯೇ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಬಹುತೇಕ ನಿರ್ಬಂಧ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಮಾತ್ರ ಸ್ಪೈಸ್ಜೆಟ್ ವಿಮಾನಯಾನ ಸೇವೆ ಲಭ್ಯವಿದೆ. ಇನ್ನುಳಿದಂತೆ ಬಹುತೇಕ ರಾಷ್ಟ್ರಗಳಿಗೆ ವಿಮಾನ ಸೇವೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸ್ಪೈಸ್ಜೆಟ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಆನಂದ್ ಡಿಯೋರ ತಿಳಿಸಿದ್ದಾರೆ.







