ಕೊರೋನಾ ಸಮೀಕ್ಷೆಗೆ ಅಡ್ಡಿ: ಉಪವಿಭಾಗಾಧಿಕಾರಿಗೆ ದೂರು
ಪುತ್ತೂರು: ಕೊರೋನಾ ಹಿನ್ನೆಲೆಯಲ್ಲಿ ವಿದೇಶದಿಂದ ಬಂದ ವ್ಯಕ್ತಿಗಳ ಮನೆಗಳಲ್ಲಿ ಮಾಹಿತಿ ಸಂಗ್ರಹಕ್ಕೆ ತೆರಳಿದ್ದ ಅರೋಗ್ಯ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಕುಟುಂಬವೊಂದು ಅಡ್ಡಿ ಪಡಿಸಿರುವ ಬಗ್ಗೆ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಆರೋಗ್ಯಾಧಿಕಾರಿಗಳು ದೂರು ನೀಡಿದ್ದಾರೆ.
ಪುತ್ತೂರು ನಗರದ ಏಳ್ಮುಡಿ ಎಂಬಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು 14 ದಿನಗಳ ಹಿಂದೆ ವಿದೇಶದಿಂದ ಊರಿಗೆ ಮರಳಿದ್ದರು. ಈ ಕುರಿತು ಮಾಹಿತಿ ಪಡೆದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ಪಡೆಯಲೆಂದು ಮಂಗಳವಾರ ಆ ಮನೆಗೆ ಭೇಟಿ ನೀಡಿ ದ್ದರು. ಈ ವೇಳೆ ವಿದೇಶದಿಂದ ಬಂದ ವ್ಯಕ್ತಿ ಮೈಸೂರಿಗೆ ಹೋಗಿದ್ದಾರೆ ಎಂದು ತಿಳಿಸಿ ಮನೆ ಮಂದಿ ಮನೆಯ ಬಾಗಿಲು ಮುಚ್ಚಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆಯಲು ತೆರಳಿದ್ದ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರಿಗೆ ದೂರು ನೀಡಲಾಗಿದೆ.