ಕೊರೋನ ವೆರಸ್ ಕುರಿತು ಪಿ.ವಿ. ಸಿಂಧು ಜನಜಾಗೃತಿ
ಹೊಸದಿಲ್ಲಿ, ಮಾ.17: ಕೊರೋನ ವೈರಸ್ ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಜನಜೀವನ ಸ್ತಬ್ಧವಾಗಿದೆ. ಜಾಗತಿಕ ಮಟ್ಟದಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದೇ ವೇಳೆ ಕ್ರೀಡಾ ತಾರೆಯರು ಜನಜಾಗೃತಿ ಮೂಡಿಸುತ್ತಿದ್ದು, ವೈರಸ್ನಿಂದ ಹೇಗೆ ಪಾರಾಗಬಹುದು ಎಂಬ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಾರಣಾಂತಿಕ ವೈರಸ್ ವಿರುದ್ಧ ಹೋರಾಟದ ಹೊಸ ಪ್ರಯತ್ನವಾಗಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ‘ಸೇಫ್ ಹ್ಯಾಂಡ್ಸ್ ಚಾಲೆಂಜ್’ ಗೆ ಕೈಜೋಡಿಸಿದ್ದಾರೆ. ತನ್ನ ಕೈಗಳನ್ನು ತೊಳೆದುಕೊಳ್ಳುತ್ತಿರುವ ವೀಡಿಯೊವನ್ನು ಟ್ವಿಟರ್ನಲ್ಲಿ ಹಾಕಿರುವ ಸಿಂಧು, ಕ್ರಿಕೆಟಿಗ ವಿರಾಟ್ ಕೊಹ್ಲಿ, ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಟೆನಿಸ್ ಐಕಾನ್ ಸಾನಿಯಾ ಮಿರ್ಝಾರಿಗೆ ತನ್ನನ್ನು ಅನುಕರಿಸುವಂತೆ ಹೇಳಿದ್ದಾರೆ. ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಸಿಂಧು ಅವರ ಚಾಲೆಂಜ್ನ್ನು ಸ್ವೀಕರಿಸಿರುವ ಕ್ರೀಡಾ ಸಚಿವ ರಿಜಿಜು, ಸ್ಮತಿ ಇರಾನಿ,ಮಣಿಕಾ ಬಾತ್ರಾ ಹಾಗೂ ಅದ್ನಾನ್ ಸಾಮಿಗೆ ಚಾಲೆಂಜ್ ಸ್ವೀಕರಿಸುವಂತೆ ತಿಳಿಸಿದ್ದಾರೆ.