ಮೋದಿ ಸರಕಾರದ ಸೋಶಿಯಲ್ ರಿಜಿಸ್ಟ್ರಿಯಿಂದ ಭಾರತೀಯರ ಹಕ್ಕುಗಳ ದಮನ: ರಿಜಿಸ್ಟ್ರಿ ರೂಪಿಸಿದ್ದ ಅಧಿಕಾರಿಯಿಂದಲೇ ಆತಂಕ
►ಎಚ್ಚರಿಕೆ ಕಡೆಗಣಿಸಿರುವ ಸರಕಾರ ►huffingtonpost.in ವಿಶೇಷ ವರದಿ

ಹೊಸದಿಲ್ಲಿ,ಮಾ.18: ಭಾರತ ಸರಕಾರದ ವಿವಾದಾತ್ಮಕ ಸೋಶಿಯಲ್ ರಿಜಿಸ್ಟ್ರಿಯ ರೂಪುರೇಷೆಗಳನ್ನು ಸಿದ್ಧಪಡಿಸುವ ಹೊಣೆ ಹೊತ್ತುಕೊಂಡಿದ್ದ ಆಗಿನ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಆರ್ಥಿಕ ಸಲಹೆಗಾರ ಮನೋರಂಜನ ಕುಮಾರ್ ಅವರು, ಇಷ್ಟೊಂದು ಅಗಾಧ ಗಾತ್ರದ ಕೇಂದ್ರೀಕೃತ, ಪರಸ್ಪರ ಸಂಯೋಜಿತ ದತ್ತಾಂಶ ಕೋಶವು ಒಂದು ಶತಕೋಟಿಗೂ ಅಧಿಕ ಭಾರತೀಯರ ಖಾಸಗಿತನ ಮತ್ತು ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದರು, ಆದರೆ ಅವರ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತು. ತನ್ನ ಬಳಿ ಲಭ್ಯವಿರುವ ದಾಖಲೆಗಳ ಪುನರ್ಪರಿಶೀಲನೆ ಇದನ್ನು ಸಾಬೀತುಗೊಳಿಸಿದೆ ಎಂದು ಸುದ್ದಿ ಜಾಲತಾಣ huffingtonpost.in ವರದಿ ಮಾಡಿದೆ.
ಸರಳವಾಗಿ ಪ್ರಜೆಗಳ ಮೇಲಿನ ಕಣ್ಗಾವಲು ವ್ಯವಸ್ಥೆ ಎಂದು ಹೇಳಬಹುದಾದ ಸೋಶಿಯಲ್ ರಿಜಿಸ್ಟ್ರಿಯು ಸರಕಾರದ ನೆರವುಗಳಿಗೆ ಜನರ ಅರ್ಹತೆಯನ್ನು ನಿರಂತರವಾಗಿ ಅಂದಾಜಿಸಲು ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕುಗಳ ಮೇಲೆ ಸ್ವಯಂಚಾಲಿತವಾಗಿ ನಿಗಾಯಿರಿಸುವ ಉದ್ದೇಶವನ್ನು ಹೊಂದಿದೆ.
ಆದರೆ ರಿಜಿಸ್ಟ್ರಿಯ ಕೆಲಸವು ಪ್ರಗತಿಗೊಳ್ಳುತ್ತಿದ್ದಂತೆ ಇಂತಹ ವ್ಯವಸ್ಥೆಯನ್ನು ಸರಕಾರಗಳು ಸುಲಭವಾಗಿ ದುರುಪಯೋಗ ಮಾಡಿಕೊಳ್ಳಬಹುದು ಎಂಬ ಕರಾಳ ಸತ್ಯ ಕುಮಾರ್ಗೆ ಅರ್ಥವಾಗಿತ್ತು. ಪೊಲೀಸ್ ವ್ಯವಸ್ಥೆ ಮತ್ತು ಅಧಿಕಾರಶಾಹಿ ನೈತಿಕತೆಯ ಕುಸಿತವನ್ನು ಪ್ರದರ್ಶಿಸಲು ಹಿಂಜರಿಯದ ಈ ಕಾಲಘಟ್ಟದಲ್ಲಿ ಇಂತಹ ವ್ಯವಸ್ಥೆಯು ಸಾಕಷ್ಟು ಖಾಸಗಿತನ ಸುರಕ್ಷಾ ಕ್ರಮಗಳನ್ನು ಹೊಂದಿರಬೇಕು ಎಂದು ಅವರು ಸೂಚಿಸಿದ್ದರು.
2017,ನ.15ರಂದು ಕುಮಾರ್ ಅವರು ನ್ಯಾಷನಲ್ ಸೋಶಿಯಲ್ ರಿಜಿಸ್ಟ್ರಿಯು ದೇಶದ ಕಡುಬಡವರಿಗೆ ಪಾರದರ್ಶಕವಾಗಿ ಲಾಭಗಳನ್ನು ಒದಗಿಸಲು ಮತ್ತು ಸರಕಾರಿ ಕಾರ್ಯಕ್ರಮಗಳ ಮೌಲ್ಯಮಾಪನಕ್ಕಾಗಿ ಸರಕಾರದ ಪಾಲಿಗೆ ಪರಿವರ್ತನೆಯ ನವೀನ ಮಾರ್ಗವಾಗಿದೆ ಎಂದು ಯೋಜನೆಯ ಪರಿಕಲ್ಪನೆ ಕುರಿತ ಟಿಪ್ಪಣಿಯಲ್ಲಿ ಬಣ್ಣಿಸಿದ್ದರು. ಈಗ ಐದು ವರ್ಷಗಳ ಬಳಿಕ ತನ್ನ ಪರಿಕಲ್ಪನೆಯ ಕೂಸಾಗಿರುವ ಸೋಶಿಯಲ್ ರಿಜಿಸ್ಟ್ರಿ ಅಂತಿಮಗೊಳ್ಳುವ ಹಂತದಲ್ಲಿರುವಾಗ ಕುಮಾರ್, ಅತ್ಯುತ್ತಮ ಉದ್ದೇಶಗಳೊಂದಿಗೆ ವಿನ್ಯಾಸಗೊಳಿಸಿದ್ದ ಈ ವ್ಯವಸ್ಥೆಯು 120 ಶತಕೋಟಿ ಭಾರತೀಯರ ಹಕ್ಕುಗಳು ಮತ್ತು ಸ್ವಾತಂತ್ರಗಳನ್ನು ಮೊಟಕುಗೊಳಿಸಲಿದೆ ಎಂಬ ಭೀತಿಯಲ್ಲಿದ್ದಾರೆ ಎಂದು huffingtonpost.in ವರದಿ ತಿಳಿಸಿದೆ.
ದತ್ತಾಂಶ ಮತ್ತು ಆಡಳಿತ ಕುರಿತು ಸಂಶೋಧಕ ಶ್ರೀನಿವಾಸ ಕೊಡಳ್ಳಿ ಅವರು ಆರ್ಟಿಐ ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆಗಳು ಸೋಶಿಯಲ್ ರಿಜಿಸ್ಟ್ರಿಯು 120 ಕೋಟಿ ಭಾರತೀಯರ ಬದುಕುಗಳ ಪ್ರತಿಯೊಂದೂ ಮಗ್ಗಲಿನ ಜಾಡು ಹಿಡಿಯಲು ಆಧಾರ್ ಸಂಖ್ಯೆಗಳನ್ನು ಬಳಸಿಕೊಳ್ಳುವ ದತ್ತಾಂಶ ಕೋಶಗಳ ಬೃಹತ್ ದತ್ತಾಂಶ ಕೋಶವಾಗಿದೆ ಮತ್ತು ಜನರ ಖಾಸಗಿ ಮಾಹಿತಿಗಳಲ್ಲಿ ಮೂಗು ತೂರಿಸಲು ಅದಕ್ಕೆ ಯಾವುದೇ ಅಪ್ಪಣೆಯ ಅಗತ್ಯವಿಲ್ಲ ಎನ್ನುವುದನ್ನು ಬಹಿರಂಗಗೊಳಿಸಿವೆ.
‘ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸರಕಾರದ ಸಾಧನೆಯಲ್ಲಿ ಪಾರದರ್ಶಕತೆಯನ್ನು ನಾನು ಬಯಸಿದ್ದರಿಂದ ಸೋಶಿಯಲ್ ರಿಜಿಸ್ಟ್ರಿ ವ್ಯವಸ್ಥೆ ಅಸ್ತಿತ್ವದಲ್ಲಿರಬೇಕು ಎಂದು ನಾನು ಇಚ್ಛಿಸಿದ್ದೆ. ಕೆಲವು ಇಲಾಖೆಗಳು ಮತ್ತು ಅಧಿಕಾರಿಗಳು ಗ್ರಾಮೀಣ ಯೋಜನೆಗಳ ಬಗ್ಗೆ ತಮ್ಮ ಸಾಧನೆಗಳನ್ನು ಉತ್ಪ್ರೇಕ್ಷಿಸುತ್ತಿದ್ದುದು ನನ್ನ ಅನುಭವಕ್ಕೆ ಬಂದಿತ್ತು. ನೂತನ ವ್ಯವಸ್ಥೆಯು ಇದಕ್ಕೆ ತಡೆ ಹಾಕುತ್ತದೆ ಮತ್ತು ಸಮಾಜ ಕಲ್ಯಾಣ ಯೋಜನೆಗಳ ಯಶಸ್ಸಿನ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಾಗುತ್ತವೆ ಎಂದು ನಾನು ನಂಬಿದ್ದೆ ’ ಎಂದು ಈಗ ಸೇವೆಯಿಂದ ನಿವೃತ್ತರಾಗಿರುವ ಕುಮಾರ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.
‘ಭಾರತವೀಗ ಪೊಲೀಸ್ ರಾಜ್ ಆಗಿ ಹೊರಹೊಮ್ಮತ್ತಿರುವುದನ್ನು ನಾನು ನೋಡುತ್ತಿದ್ದೇನೆ. ದುರದೃಷ್ಟವಶಾತ್ ಇಂದು ಎಲ್ಲ ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳನ್ನು ಪೊಲೀಸಿಂಗ್ ಏಜೆಂಟ್ ಆಗಿ ಪರಿವರ್ತಿಲಾಗಿದೆ. ವಿಮಾ ನಿಯಂತ್ರಣ,ಬ್ಯಾಕಿಂಗ್,ತೆರಿಗೆ ಅಥವಾ ಆಸ್ತಿ ನೋಂದಣಿ ಹೀಗೆ ಯಾವುದೇ ಕ್ಷೇತ್ರವಿರಲಿ, ಪ್ರತಿಯೊಬ್ಬರೂ ನಿಮ್ಮನ್ನು ಕ್ರಿಮಿನಲ್ ಕೋನದಿಂದ ನೋಡುತ್ತಿದ್ದಾರೆ. ಈ ಎಲ್ಲ ಪೊಲೀಸಿಂಗ್ ಕೆಲಸಕ್ಕೆ ಸೋಶಿಯಲ್ ರಿಜಿಸ್ಟ್ರಿ ನೆರವಾಗಲಿದೆ. ಆಧಾರ್ನೊಂದಿಗಿನ ಎಲ್ಲ ಮಾಹಿತಿಗಳೂ ಸರಕಾರದ ಬಳಿಯಲ್ಲಿವೆ. ಅವೆಲ್ಲವುಗಳನ್ನು ಒಂದೇ ಸ್ಥಳದಲ್ಲಿ ಸಮನ್ವಯಗೊಳಿಸಲು ಯಾರಾದರೂ ಸಾಫ್ಟ್ವೇರ್ನ್ನು ರಚಿಸಬೇಕು ಅಷ್ಟೇ’ ಎಂದು ಕುಮಾರ್ ತಿಳಿಸಿದರು.







