ರಾಜ್ಯದ ಅಭಿವೃದ್ಧಿಗೆ ವಿಶ್ವ ಬ್ಯಾಂಕಿನಿಂದ ಸಾಲ: ಸಿಎಂ ಯಡಿಯೂರಪ್ಪ

ಬೆಂಗಳೂರು, ಮಾ.19: ವಿತ್ತೀಯ ಶಿಸ್ತಿನ ಮಿತಿಯಲ್ಲೆ ಸಾಲ ಪಡೆದಿದ್ದು, ವಿಶ್ವ ಬ್ಯಾಂಕ್ನಿಂದ ಸಾಲವನ್ನು ತಂದಾದರೂ ರಾಜ್ಯದ ಅಭಿವೃದ್ಧಿಗೆ ಎಲ್ಲ ಪ್ರಯತ್ನವನ್ನು ನಮ್ಮ ಸರಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಜೆಟ್ನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ಕೇಂದ್ರದ ಅನುದಾನ ಕಡಿತ, ಸಂಪನ್ಮೂಲ ಕೊರತೆ ಸೇರಿದಂತೆ ಎಲ್ಲವನ್ನು ರಾಜ್ಯದ ಜನರಿಗೆ ತಿಳಿಸಿದ್ದೇನೆ ಎಂದರು.
ದೇಶದಲ್ಲೆ ಆರ್ಥಿಕ ಹಿಂಜರಿತದ ಪರಿಣಾಮ ಅದು ರಾಜ್ಯದ ಮೇಲೆಯೂ ಆಗಿದೆ. ಸಿದ್ದರಾಮಯ್ಯನವರು ನೀಡಿರುವ ಅಂಕಿ-ಅಂಶಗಳೆಲ್ಲವೂ ವಾಸ್ತವವಾಗಿವೆ ಎಂದು ಒಪ್ಪಿಕೊಂಡ ಅವರು, ಕೇಂದ್ರದಿಂದ ಬರಬೇಕಿರುವ ಅನುದಾನ ಪಡೆಯಲು ಸರಕಾರ ಪ್ರಯತ್ನ ನಡೆಸಲಿದೆ ಎಂದರು.
2009-10ರಲ್ಲಿ ಆರ್ಥಿಕ ಹಿಂಜರಿತದ ಕಾರಣಕ್ಕೆ ಕೇಂದ್ರ ಸರಕಾರವೇ ಸಾಲದ ಮಿತಿಯನ್ನು ಶೇ.3ರಿಂದ ಶೇ.3.5ಕ್ಕೆ ಹೆಚ್ಚಳ ಮಾಡಿತ್ತು. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದ ಅವರು, ವಾಸ್ತವಿಕ ಅಂಕಿ-ಸಂಖ್ಯೆಗಳನ್ನು ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.







