ಮಂಗಳೂರು: ಆರ್ಟಿಒ ಸೇವೆಯಲ್ಲಿ ವ್ಯತ್ಯಯ
ಮಂಗಳೂರು, ಮಾ.19: ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಿ ಕಚೇರಿಗಳಲ್ಲಿ ಜನಸಂದಣಿ ಕಡಿಮೆಗೊಳಿಸುವ ಉದ್ದೇಶದಿಂದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ (ಆರ್ಟಿಒ) ಸಿಗುವ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೇವೆಯಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ದ.ಕ. ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಕಚೇರಿಗಳಾದ ಮಂಗಳೂರು, ಪುತ್ತೂರು ಹಾಗೂ ಬಂಟ್ವಾಳ ಕಚೇರಿಗಳಲ್ಲಿ ಹಲವು ದೈನಂದಿನ ಕೆಲಸ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ. ವಾಹನ ಚಾಲನಾ ಕಲಿಕಾ ಅನುಜ್ಞಾ ಪತ್ರ ನೀಡಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.
ಸಿಂಧುತ್ವ ಹೊಂದಲಿರುವ ಕಲಿಕಾ ಚಾಲನಾ ಅನುಜ್ಞಾಪತ್ರದ ಅಭ್ಯರ್ಥಿಗಳು ಮಾತ್ರ ಮಾ.15ರವರೆಗೆ ಕಾಯಂ ಚಾಲನಾ ಅನುಜ್ಞಾಪತ್ರಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಮಾ.20ರಿಂದ ಯಾವುದೇ ಕಲಿಕಾ ಚಾಲನಾ ಅನುಜ್ಞಾಪತ್ರ ಮತ್ತು ಕಾಯಂ ಚಾಲನಾ ಅನುಜ್ಞಾಪತ್ರಗಳಿಗಾಗಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ವಾಹನ ಚಾಲನಾ ಅನುಜ್ಞಾಪತ್ರದ ನವೀಕರಣಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಆರ್ಟಿಒ ಜೆ.ಪಿ. ಗಂಗಾಧರ ಸ್ಪಷ್ಟಪಡಿಸಿದ್ದಾರೆ.







