ಜನತಾ ಕರ್ಫ್ಯೂ: ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಲಾಕ್ ಡೌನ್
►ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧ ►ಭಿಕೋ ಎನ್ನುತ್ತಿದ್ದ ಪ್ರಮುಖ ರಸ್ತೆಗಳು

ಚಿಕ್ಕಮಗಳೂರು, ಮಾ.22: ಕೊರೋನ ವೈರಸ್ ಸೋಂಕಿನ ಭೀತಿ ಕಾಫಿನಾಡಿನ ಜನರಲ್ಲಿ ಭಾರೀ ಆತಂಕವನ್ನೇ ಮೂಡಿಸಿದೆ ಎಂಬುದು ರವಿವಾರ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿದ್ದ ದೃಶ್ಯಾವಳಿಗಳಿಂದ ತಿಳಿದು ಬಂದಿದೆ. ಕಾಫಿ ನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವ್ಯಾಪಾರ ವಹಿವಾಟು, ವಾಹನಗಳ ಸಂಚಾರ ಸೇರಿದಂತೆ ಸಾರ್ವಜನಿಕರು ಓಡಾಟವೂ ಸ್ಥಗಿತಗೊಳ್ಳುವ ಮೂಲಕ ಕೊರೋನ ವೈರಸ್ ಸೋಂಕಿನ ಸಂಬಂಧ ಸರಕಾರಗಳ ಮುನ್ನೆಚ್ಚರಿಕಾ ಕ್ರಮಗಳಿಗೆ ಜನತೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.
ರವಿವಾರ ಮುಂಜಾನೆಯಿಂದಲೇ ಸಾರ್ವಜನಿಕರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದು, ನಗರದಲ್ಲಿ ಮುಂಜಾನೆ ಹಾಲು ಮಾರಾಟ ಮಾಡುವ ಕೇಂದ್ರಗಳು ತೆರದುಕೊಂಡಿದ್ದು, ಕೆಲವೆಡೆ ಕಾಫಿ, ಟೀ ಕ್ಯಾಂಟಿನ್ಗಳೂ ತೆರದುಕೊಂಡಿದ್ದ ದೃಶ್ಯಗಳು ಕಂಡು ಬಂದವು. ಇವುಗಳ ಹೊರತಾಗಿ ಎಲ್ಲ ಅಂಗಡಿ ಮುಂಗಟ್ಟುಗಳನ್ನೂ ಬಂದ್ ಮಾಡಲಾಗಿತ್ತು. ನಗರದಾದ್ಯಂತ ಇರುವ ಮೆಡಿಕಲ್ ಶಾಪ್ಗಳು, ಕ್ಲಿನಿಕ್ಗಳು ಹಾಗೂ ಆಸ್ಪತ್ರೆಗಳು ಬಾಗಿಲು ತೆರೆದಿದ್ದು, ಖಾಸಗಿ ಆಸ್ಪತ್ರೆಗಳು ಮತ್ತು ಜಿಲ್ಲಾಸ್ಪತ್ರೆ ಇಡೀ ದಿನ ಎಂದಿನಂತೆ ಕಾರ್ಯನಿರ್ವಹಿಸಿತಾದರೂ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ತುರ್ತು ಚಿಕಿತ್ಸೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಆಂಬ್ಯುಲೆನ್ಸ್ ಸೇವೆಗಳು ಲಭ್ಯ ಇದ್ದವು.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಸಾರಿಗೆ ಸಂಸ್ಥೆ ಬೆಂಬಲ ಸೂಚಿಸಿ ಎಲ್ಲ ಬಸ್ಗಳ ಓಡಾವನ್ನು ಸ್ಥಗಿತಗೊಳಿಸಿದ್ದರಿಂದ ಮುಂಜಾನೆಯಿಂದ ರಾತ್ರಿವರೆಗೂ ಯಾವುದೇ ಕೆಎಸ್ಸಾರ್ಟಿಸಿ ಬಸ್ ಗಳು ನಗರದಲ್ಲಿ ಸಂಚಾರ ಮಾಡಲಿಲ್ಲ. ಹೊರ ಜಿಲ್ಲೆಗಳಿಂದ ನಗರಕ್ಕಾಗಮಿಸುತ್ತಿದ್ದ ಬಸ್ಗಳೂ ರವಿವಾರ ನಗರಕ್ಕಾಮಿಸಿಲ್ಲ. ಇದರಿಂದಾಗಿ ನಗರದ ಹೃದಯ ಭಾಗದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು.
ಖಾಸಗಿ ಸಾರಿಗೆ ಬಸ್ಗಳ ಓಡಾಟವೂ ರವಿವಾರ ಸ್ಥಗಿತಗೊಂಡಿದ್ದರಿಂದ ರಸ್ತೆಯಲ್ಲಿ ಖಾಸಗಿ ಬಸ್ಗಳ ಓಡಾವೂ ಕಂಡುಬರಲಿಲ್ಲ. ಇನ್ನು ನಗರದಲ್ಲಿ ವಿವಿಧೆಡೆ ಇರುವ ಆಟೊ ನಿಲ್ದಾಣಗಳೂ ಖಾಲಿಯಾಗಿದ್ದು, ನಗರದಲ್ಲಿ ರವಿವಾರ ಆಟೊ ಸೇವೆಯೂ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಜನ ಜಂಗುಳಿ ಹಾಗೂ ಸಂಚಾರ ದಟ್ಟನೆಯಿಂದ ಕೂಡಿರುತ್ತಿದ್ದ ಎಂಜಿ ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆಗಳು ಸಂಪೂರ್ಣವಾಗಿ ಖಾಲಿ ಖಾಲಿಯಾಗಿದ್ದ ದೃಶ್ಯಗಳು ಕಂಡುಬಂತು. ಮೆಡಿಕಲ್ ಶಾಪ್ ಗಳ ತೆರೆದಿದ್ದವು. ಹೊಟೇಲ್, ಲಾಡ್ಜ್, ರೆಸ್ಟೋರೆಂಟ್ಗಳ ಮಾಲಕರ ಸಂಘವು ಕೊರೋನ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದ ಪರಿಣಾಮ ರವಿವಾರ ಬೆಳಗ್ಗೆಯಿಂದ ರಾತ್ರಿವರೆಗೂ ಎಲ್ಲ ಹೊಟೇಲ್, ಲಾಡ್ಜ್ಗಳು ಬಂದ್ ಆಗಿದ್ದವು.
ನಗರದ ರಸ್ತೆಗಳಲ್ಲಿ ಒಂದೇ ಒಂದು ಪ್ರವಾಸಿಗರ ವಾಹನಗಳೂ ಕಾಣಲಿಲ್ಲ. ಇನ್ನು ಸದಾ ಗ್ರಾಹಕರಿಂದ ತುಂಬಿತುಳುಕುತ್ತಿದ್ದ ನಗರದ ಹನುಂತಪ್ಪ ವೃತ್ತದಲ್ಲಿರುವ ಹೂವಿನ ಮಾರುಕಟ್ಟೆ, ಸಂತೇ ಮೈದಾನದ ಆವರಣದಲ್ಲಿನ ತರಕಾರಿ, ಕುರಿ, ಕೋಳಿ, ಮೀನು ಮಾರಾಟಗಾರರೂ ರವಿವಾರ ವ್ಯಾಪಾರವನ್ನು ಸ್ಥಗಿತಗೊಳಿಸಿ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದರು. ಅಂಗಡಿಗಳನ್ನು ಬಂದ್ ಮಾಡಿದ್ದ ವ್ಯಾಪಾರಿಗಳು, ಹಮಾಲಿ ಕಾರ್ಮಿಕರು ಸಂತೆ ಮೈದಾನದ ಆವರಣದಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಕೊಂಡು ಕಾಲ ಕಳೆಯುತ್ತಿದ್ದ ದೃಶ್ಯಗಳೂ ಕಂಡು ಬಂದವು. ಲಾರಿ ಮಾಲಕರು, ಚಾಲಕರ ಸಂಘವೂ ಜನತಾ ಕರ್ಫ್ಯೂ ಬೆಂಬಲಿಸಿ ಲಾರಿಗಳನ್ನು ರಸ್ತೆಗಿಳಿಸದೇ ಇದ್ದ ಪರಿಣಾಮ ಸಂತೆ ಮೈದಾನದಲ್ಲಿ ನೂರಾರು ಲಾರಿಗಳು ಸರತಿ ಸಾಲಿನಲ್ಲಿ ನಿಂತಿದ್ದವು. ನಗರದ ವಿವಿಧ ಬಡಾವಣೆಗಳಲ್ಲಿ ಜನರ ಓಡಾಟ ತೀರಾ ವಿರಳವಾಗಿತ್ತು. ಕೆಲ ಬಡಾವಣೆಗಳಲ್ಲಿ ನಿಗದಿಯಾಗಿದ್ದ ಗೃಹಪ್ರವೇಶ, ಪೂಜೆ ಕಾರ್ಯಕ್ರಮಗಳಿಗೆ ಜನತಾ ಕರ್ಫ್ಯೂ ಯಾವುದೇ ಅಡ್ಡಿಯಾಗಲಿಲ್ಲ.
ಕೊರೋನ ವೈರಸ್ ಭೀತಿ ದೇವಾಲಯಗಳಿಗೂ ತಟ್ಟಿದ್ದು, ನಗರದ ವಿವಿಧೆಡೆಯ ನೂರಾರು ದೇವಾಲಯಗಳು ರವಿವಾರ ಎಂದಿನಂತೆ ಬಾಗಿಲು ತೆರೆದಿದ್ದರೂ ದೇವಾಲಯಗಳ ಬಳಿ ಜನರು ಮಾತ್ರ ಕಂಡು ಬರಲಿಲ್ಲ. ಮುಂಜಾನೆ ದೇವಾಲಯಗಳಲ್ಲಿ ಅರ್ಚಕರು ಪೂಜೆ ಮಾಡುತ್ತಿದ್ದ ದೃಶ್ಯಗಳು ಮಾತ್ರ ಕಂಡು ಬಂದವು. ಕೊರೋನ ಜಾಗೃತಿಗಾಗಿ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಾದ್ಯಂತ ಸಂಚಾರ ಪೊಲೀಸರು ಹಾಗೂ ಪೊಲೀಸ್ ಪೇದೆಗಳು ಬೈಕ್, ಜೀಪ್ಗಳಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಒಟ್ಟಾರೆ ಕೊರೋನ ಜಾಗೃತಿಗಾಗಿ ಕರೆ ನೀಡಲಾದ ಸ್ವಯಂ ನಿರ್ಬಂದ ಕಾರ್ಯಕ್ರಮಕ್ಕೆ ರವಿವಾರ ಜಿಲ್ಲೆಯ ಸಾರ್ವಜನಿಕರು ಉತ್ತಮ ಬೆಂಬಲ ನೀಡಿದ್ದರು.
ಸೈಕಲ್ನಲ್ಲಿ ನಗರ ವೀಕ್ಷಿಸಿದ ಸಚಿವ ಸಿ.ಟಿ. ರವಿ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ರವಿವಾರ ಬೆಳಗ್ಗೆ ನಗರದ ಕೆಲ ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಾ ಬಂದ್ ಆಗಿದ್ದ ನಗರದ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡರು. ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ.ರವಿ ಅವರ ಮನೆಯಿಂದ ಸೈಕಲ್ನಲ್ಲೇ ಎಂಜಿ ರಸ್ತೆ, ಐಜಿ ರಸ್ತೆ, ಹನುಂತಪ್ಪವೃತ್ತದಲ್ಲಿ ಸುತ್ತು ಹಾಕಿದ ರವಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದನ್ನು ವೀಕ್ಷಣೆ ಮಾಡಿದರು. ಈ ವೇಳೆ ರಸ್ತೆ ಮಧ್ಯೆ ಸಿಕ್ಕವರನ್ನು ಅವರು ಮಾತನಾಡಿಸಿ ಮುಂದಕ್ಕೆ ಹೋಗುತ್ತಿದ್ದ ದೃಶ್ಯಗಳೂ ಕಂಡು ಬಂದವು.






.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)

