ಜನತಾ ಕರ್ಫ್ಯೂ: ಸ್ನೇಹಿತನ ಅಂತಿಮ ನಮನಕ್ಕೂ ಸಿಗಲಿಲ್ಲ ಹೂವು, ತುಳಸಿ !
ಜನತಾ ಕರ್ಫ್ಯೂ ಹಿನ್ನೆಲೆ ಬಿಕೋ ಎನ್ನುತ್ತಿರುವ ಬೆಂಗಳೂರಿನ ರಸ್ತೆ
ಬೆಂಗಳೂರು, ಮಾ.22: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಎಲ್ಲ ಮಾರುಕಟ್ಟೆಗಳು ಬಂದ್ ಆಗಿದ್ದು, ವಕೀಲರೊಬ್ಬರು ಸ್ನೇಹಿತನ ಅಂತಿಮ ನಮನಕ್ಕೆ ಹೂವು ಹಾಗೂ ತುಳಸಿಗಾಗಿ ಟಿ.ದಾಸರಹಳ್ಳಿ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗಳಿಗೆ ಭೇಟಿ ನೀಡಿ ಹುಡುಕಾಟ ನಡೆಸಿದರೂ ಸಿಗದಿದ್ದಕ್ಕೆ ಕಣ್ಣೀರು ಸುರಿಸಿದ ಘಟನೆ ರವಿವಾರ ನಡೆದಿದೆ.
ವಕೀಲ ವೃತ್ತಿಯಲ್ಲಿ ತೊಡಗಿರುವ ಹರೀಶ್ ಎಂಬುವವರು ಮಾದನಾಯಕನಹಳ್ಳಿಯಿಂದ ಟಿ.ದಾಸರಹಳ್ಳಿ, ಯಶವಂತಪುರ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗಳಿಗೆ ಸ್ನೇಹಿತನ ಅಂತಿಮ ನಮನಕ್ಕೆ ಹೂವು ಹಾಗೂ ತುಳಿಸಿಗಾಗಿ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ. ಆದರೆ, ಅಂತಿಮವಾಗಿ ಎಲ್ಲಿಯೂ ಹೂವು ಹಾಗೂ ತುಳಸಿ ಸಿಗದಿದ್ದಕ್ಕಾಗಿ ಕಣ್ಣೀರು ಸುರಿಸಿ ಬಳಿಕ ಬರಿಗೈಯಲ್ಲಿಯೇ ಹೋಗಿ ಸ್ನೇಹಿತನ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದಾರೆ.
'ಬೆಳಗ್ಗೆ ನನ್ನ ಸ್ನೇಹಿತನ ಕುಟುಂಬದವರು ಪೋನ್ ಮಾಡಿ ಸ್ನೇಹಿತನ ಸಾವಿನ ವಿಚಾರವನ್ನು ತಿಳಿಸಿದ್ದರೂ ಬರಿಗೈಯಲ್ಲಿ ಹೋಗುವುದು ಸರಿ ಇರುವುದಿಲ್ಲ ಎಂಬ ಕಾರಣಕ್ಕಾಗಿ ಟಿ.ದಾಸರಹಳ್ಳಿ, ಯಶವಂತಪುರ ಮಾರುಕಟ್ಟೆ ಸೇರಿ ಹಲವು ಮಾರುಕಟ್ಟೆಗೆ ಭೇಟಿ ನೀಡಿ, ಹೂವು ಹಾಗೂ ತುಳಸಿಗಾಗಿ ಹೋರಾಟ ನಡೆಸಿದೆ. ಆದರೆ, ಜನತಾ ಕರ್ಪ್ಯೂನಿಂದ ನಮಗೆ ಇವೆಲ್ಲರೂ ದೊರಕದಂತಾಯಿತು ಎಂದು ತಿಳಿಸಿದ್ದಾರೆ.