ರಾಜ್ಯದ 9 ಜಿಲ್ಲೆಗಳು 'ಶಟ್ ಡೌನ್: ತುರ್ತು ಸೇವೆ ಆರಂಭಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ಕರೆ
ಬೆಂಗಳೂರು, ಮಾ.22: ರಾಜ್ಯದ 9 ಜಿಲ್ಲೆಗಳು ನಾಳೆಯಿಂದ(ಮಾ.23) 'ಶಟ್ ಡೌನ್' ಆಗಲಿರುವುದರಿಂದ ಕರ್ನಾಟಕ ಮುಸ್ಲಿಂ ಜಮಾಅತ್ ನ ಎಲ್ಲಾ ಬ್ಲಾಕ್, ತಾಲೂಕು ಮತ್ತು ಜಿಲ್ಲಾ ಸಮಿತಿಗಳು ಕೂಡಲೇ ಈ ನಿಟ್ಟಿನಲ್ಲಿ ತುರ್ತುಸೇವೆಯನ್ನು ಆರಂಭಿಸಲು ಸನ್ನದ್ಧರಾಗಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಕರೆ ನೀಡಿದೆ.
ನಾಳೆಯಿಂದ ರಾಜ್ಯದ 9 ಜಿಲ್ಲೆಗಳು 'ಶಟ್ ಡೌನ್' ಆಗಲಿರುವುದರಿಂದ ಹೆಚ್ಚಿನ ವ್ಯಾಪಾರ ವಹಿವಾಟುಗಳು ಸ್ಥಬ್ದವಾಗಲಿದೆ. ಈ ಸಂದರ್ಭದಲ್ಲಿ ದಿನಕೂಲಿ ಕಾರ್ಮಿಕರು, ಗೂಡಂಗಡಿ, ಫುಟ್ ಪಾತ್ ಮುಂತಾದ ಚಿಕ್ಕ ಪುಟ್ಟ ವ್ಯಾಪಾರಸ್ಥರ ಕುಟುಂಬಗಳಲ್ಲಿ ದಿನನಿತ್ಯದ ಆಹಾರ ಸಾಮಾಗ್ರಿಗಳ ಕೊರತೆ ಸಂಭವಿಸುವ ಸಾಧ್ಯತೆ ಇರುವುದರಿಂದ ಎಲ್ಲಾ ಜಮಾಅತ್ ಸಮಿತಿಗಳು ತಮ್ಮ ಜಮಾಅತ್ ಮತ್ತು ಪರಿಸರದಲ್ಲಿರುವ ಅಂತಹ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಾಗ್ರಿಗಳ ಪೂರೈಕೆಯನ್ನು ಮಾಡಬೇಕಾಗಿ ಎಲ್ಲಾ ಜಮಾಅತ್ ಸಮಿತಿಗಳಲ್ಲಿ ವಿನಂತಿಸುತ್ತೇವೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಫ್ತಿ ಅನ್ವರ್ ಅಲಿ ಸಾಹೇಬ್, ಪ್ರ.ಕಾರ್ಯದರ್ಶಿ ಎನ್.ಕೆ.ಎಂ. ಶಾಫಿ ಸಅದಿ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.





