ಏಳಕ್ಕೇರಿದ ಕೊರೋನ ಸಾವು: ಹಲವು ರಾಜ್ಯಗಳಲ್ಲಿ ದಿಗ್ಬಂಧನ
ಹೊಸದಿಲ್ಲಿ, ಮಾ.23: ದೇಶದಲ್ಲಿ ಕೊರೋನ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 7ಕ್ಕೇರಿದ್ದು, ಸೋಂಕು ಪ್ರಕರಣಗಳು ಕೂಡಾ ನಿರಂತರವಾಗಿ ಹೆಚ್ಚುತ್ತಲೇ ಇವೆ. ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 390ಕ್ಕೆ ಹೆಚ್ಚಿದ್ದು, ಹಲವು ರಾಜ್ಯಗಳು ಸಂಪೂರ್ಣ ಲಾಕ್ಡೌನ್ ಘೋಷಿಸಿವೆ.
ದೇಶಾದ್ಯಂತ ಕೊರೋನ ಪ್ರಕರಣಗಳು ವರದಿಯಾಗಿರುವ 75 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ಗೆ ರವಿವಾರ ರಾತ್ರಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಆದೇಶಿಸಲಾಗಿದೆ. ಹೊಸದಿಲ್ಲಿ, ಪಂಜಾಬ್, ರಾಜಸ್ಥಾನ ಹಾಗೂ ತೆಲಂಗಾಣ ಸಂಪೂರ್ಣ ಲಾಕ್ಡೌನ್ ಘೋಷಿಸಿವೆ. ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಮಾಲ್, ಅಂಗಡಿಗಳನ್ನು ಮಾರ್ಚ್ ಅಂತ್ಯದ ವರೆಗೆ ಮುಚ್ಚಲಾಗಿದೆ.
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಅನಗತ್ಯವಾಗಿ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದ್ದು, ಅಂತರ ರಾಜ್ಯ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ. ಎಲ್ಲೆಡೆ ಮೆಟ್ರೋ ಸೇವೆ ರದ್ದಾಗಿದೆ. ಕೇರಳ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 390ಕ್ಕೇರಿದೆ. ಈ ಪೈಕಿ 7 ಮಂದಿ ಮೃತಪಟ್ಟಿದ್ದರೆ, 25 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಬಿಹಾರ ಹಾಗೂ ಗುಜರಾತ್ನಲ್ಲಿ ಹೊಸ ಕೊರೋನ ಸಾವಿನ ಪ್ರಕರಣಗಳು ವರದಿಯಾಗಿವೆ.
ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಮುಚ್ಚಲಾಗಿದ್ದು, ಎಲ್ಲ ಅಂತಾರಾಷ್ಟ್ರೀಯ ವಿಮಾನಗಳನ್ನು ಮಾರ್ಚ್ 29ರವರೆಗೆ ತಡೆಹಿಡಿಯಲಾಗುವುದು. ಈ ಮಧ್ಯೆ ಪತ್ರಕರ್ತ ಬಶೀರ್ ಸಾವು ಪ್ರಕರಣದ ಪ್ರಮುಖ ಆರೋಪಿ, ಐಎಎಸ್ ಅಧಿಕಾರಿ ಶ್ರೀರಾಮ್ ಅವರನ್ನು ಸರ್ಕಾರ ಕರ್ತವ್ಯಕ್ಕೆ ಮರು ನಿಯೋಜಿಸಿದ್ದು, ಕೋವಿಡ್-19 ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಿದೆ.