ಕೊರೋನ: ಮೇ ಅಂತ್ಯದೊಳಗೆ ದೇಶದಲ್ಲಿ 30 ಸಾವಿರ ಜನರು ಸಾವನ್ನಪ್ಪುವ ಭೀತಿ: ತಜ್ಞರ ಎಚ್ಚರಿಕೆ

ಹೊಸದಿಲ್ಲಿ, ಮಾ.23: ಭಾರತದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೊರೋನ ವೈರಸ್ ಸೋಂಕನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹೋದಲ್ಲಿ ಮುಂದಿನ ಕೆಲವು ವಾರಗಳಲ್ಲಿ ದೇಶವು ಊಹಿಸಲೂ ಅಸಾಧ್ಯವಾದಂತಹ ದುರಂತವನ್ನು ಕಾಣಬೇಕಾದೀತೆಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಮೊದಲ ಕೊರೋನ ಪ್ರಕರಣಗಳ ಸಂಖ್ಯೆ 50ನ್ನು ತಲುಪಲು ನಲ್ವತ್ತು ದಿನಗಳೇ ಬೇಕಾದವು. ಆದರೆ ಆನಂತರ ಕೇವಲ ಐದು ದಿನಗಳಲ್ಲಿ ಸೋಂಕಿತ ಸಂಖ್ಯೆ 100ನ್ನು ದಾಟಿತು. ಬಳಿಕ ಮೂರೇ ದಿನಗಳಲ್ಲಿ ಈ ಸಂಖ್ಯೆ 150ಕ್ಕೇರಿತ್ತು ಮತ್ತು ಕೇವಲ ಇನ್ನೆರಡು ದಿನಗಳಲ್ಲಿ 200ರ ಸನಿಹಕ್ಕೆ ತಲುಪಿದೆ. ಹೀಗೆ ಕೊರೋನ ವೈರಸ್ನ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಭಾರತದಲ್ಲೀಗ ದೃಢೀಕರಣಗೊಂಡ ಕೊರೋನ ಪ್ರಕರಣಗಳ ಸಂಖ್ಯೆ ಈ ತಿಂಗಳ ಆರಂಭದಲ್ಲಿ ಇದ್ದ ಸಂಖ್ಯೆಗಿಂತ ಕೇವಲ ಐದಕ್ಕಿಂತಲೂ ಕಡಿಮೆ ದಿನದೊಳಗೆ ಎರಡು ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಕೊರೋನ ವೈರಸ್ ಹಾವಳಿಯ ಭೀಕರ ದುರಂತವನ್ನು ಎದುರಿಸುತ್ತಿರುವ ದೇಶಗಳ ಸಾಲಿಗೆ ಭಾರತ ಸೇರ್ಪಡೆಗೊಳ್ಳುವ ದಿನಗಳು ದೂರವಿಲ್ಲವೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಪ್ರತಿ ಎರಡು ದಿನಗಳಿಗೊಮ್ಮೆ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಳವಾಗುತ್ತಿದೆ.
ದಕ್ಷಿಣ ಕೊರಿಯದ ಬಳಿಕ ಕೇವಲ ಹತ್ತು ದಿನಗಳ ಬಳಿಕ ಇಟಲಿಯ ಲ್ಲಿ ಮೊತ್ತಮೊದಲ ಪ್ರಕರಣ ವರದಿಯಾಗಿತ್ತು. ಆನಂತರದ 20 ದಿನಗಳಲ್ಲಿ ಇಟಲಿಯಲ್ಲಿ 10ಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿದ್ದವು. ಆದರೆ ಬಳಿಕ ಒಂದೇ ವಾರದಲ್ಲಿ ಇಟಲಿಯಲ್ಲಿ ಕೊರೊನ ಪೀಡಿತರ ಪ್ರಕರಣವು ನೂರುಪಟ್ಟು ಹೆಚ್ಚಿತ್ತು. ಆದರೆ ಆನಂತರದ ವಾರದಲ್ಲಿ ದಕ್ಷಿಣ ಕೊರಿಯದಲ್ಲಿ ಕೊರೋನಾ ಬಾಧಿತರ ಸಂಖ್ಯೆ ಕುಸಿಯತೊಡಗಿದರೆ, ಇಟಲಿಯಲ್ಲಿ ಒಂದೇ ಸಮನೆ ಏರಿಕೆಯಾಗಿತ್ತು. ಇಟಲಿಯಂತೆ ಸೋಂಕು ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳಬೇಕಾದರೆ ಭಾರತವು ತನ್ನ ಪ್ರಜೆಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಲು ರಾಜ್ಯಗಳ ಲಾಕ್ ಡೌನ್ ಸೇರಿದಂತೆ ಜಾರಿಗೊಳಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಈಗ ಕೊರೋನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ, ಶೇ.3.4 ಪ್ರಕರಣಗಳಲ್ಲಿ ಸಾವುಗಳು ಸಂಭವಿಸಿವೆ. ಈ ಪ್ರವೃತ್ತಿ ಇದೇ ರೀತಿ ಮುಂದುವರಿದಲ್ಲಿ ಮೇ ಅಂತ್ಯದೊಳಗೆ 10 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಲಿದ್ದು, ಅವರಲ್ಲಿ 30 ಸಾವಿರ ಮಂದಿ ಸಾವನ್ನಪ್ಪುವ ಅಪಾಯ ವಿದೆಯೆಂದು ಅದು ಲೆಕ್ಕಾಚಾರ ಹಾಕಿದೆ.ಜೂನ್ ವೇಳೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲೂ ಆಸ್ಪತ್ರೆಗಲ್ಲಿ ಹಾಸಿಗೆಗಳು ಕೂಡಾ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೆಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.
ಅದರೆ ಜೈವಿಕ ಅಂಕಿಅಂಶ ತಜ್ಞರು ಲೆಕ್ಕಾಚಾರದ ಪ್ರಕಾರ ಸೋಂಕು ಪೀಡಿತರ ಸಂಖ್ಯೆಯು ಇನ್ನೂ ಹೆಚ್ಚಾಗಲಿದೆ. ಮೇ 15ರೊಳಗೆಯೇ ಅದು 10 ಲಕ್ಷವನ್ನು ತಲುಪಲಿದೆಯೆಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.
ಕೃಪೆ: theprint.in