ಕೇರಳದಲ್ಲಿ ಎಲ್ಲ ಕುಟುಂಬಗಳಿಗೂ ಒಂದು ತಿಂಗಳು ಉಚಿತ ಪಡಿತರ ಅಕ್ಕಿ
ತಿರುವನಂತಪುರ, ಮಾ.25: ಲಾಕ್ ಡೌನ್ ವೇಳೆ ಆಹಾರ ಕೊರತೆ ಉಂಟಾಗುವುದನ್ನು ತಪ್ಪಿಸಲು ಕೇರಳ ಸರಕಾರವು ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ ಒಂದು ತಿಂಗಳು ಉಚಿತವಾಗಿ ಪಡಿತರ ಅಕ್ಕಿ ನೀಡುವ ನಿರ್ಧಾರ ಕೈಗೊಂಡಿದೆ.
ಆರ್ಥಿಕ ಸ್ಥಿತಿಗನುಗುಣವಾಗಿ ಪಡಿತರ ಕಾರ್ಡ್ ಹೊಂದಿರುವವರಿಗೆ ಕನಿಷ್ಠ 15 ಕೆ.ಜಿ. ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 25 ಕೆ.ಜಿ. ಅಕ್ಕಿ ಮತ್ತು 7 ಕೆ.ಜಿ ಗೋದಿ ದೊರೆಯಲಿದೆ.
ಸರಕಾರ ಉತ್ತಮ ಗುಣಮಟ್ಟದ ಅಕ್ಕಿಯನ್ನು ವಿತರಿಸಲಿದೆ. ಸರಕಾರ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮಾ.27ರಿಂದ ವಿತರಿಸಲಿದ್ದು, ಅಕ್ಟೋಬರ್ ಮತ್ತು ನವೆಂಬರ್ 2019ರ ಬಾಕಿಯನ್ನು ಒಟ್ಟಿಗೆ ವಿತರಿಸಲಿದೆ.
ಪಡಿತರ ಅಂಗಡಿಗಳು ಈ ಮೊದಲು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯ ತನಕ ತೆರೆದಿರುತ್ತಿತ್ತು. ಇದೀಗ ಕೆಲಸದ ಅವಧಿಯಲ್ಲಿ ಬದಲಾಗಿದ್ದು, ಲಾಕ್ ಡೌನ್ ವೇಳೆ 9 ರಿಂದ 5 ಗಂಟೆಯ ತನಕ ಪಡಿತರ ಅಂಗಡಿಗಳು ತೆರೆದಿರುತ್ತದೆ. ಮಧ್ಯಾಹ್ನ 1 ರಿಂದ 2 ಗಂಟೆ ತನಕ ವಿರಾಮ ಇರುತ್ತದೆ.
ಮಾ.23ರಂದು ಲಾಕ್ ಡೌನ್ ಪ್ರಕಟಗೊಂಡಾಗ ಅಗತ್ಯ ಸಾಮಗ್ರಿಗಳ ದೀನಸಿ , ತರಕಾರಿ, ಮೊಟ್ಟೆ, ಹಾಲು , ಮೀನು, ಮಾಂಸದ ಅಂಗಡಿಗಳು ಬೆಳಗ್ಗೆ 7ರಿಂದ ಸಂಜೆ 5ರ ತನಕ ಕಾಸರಗೋಡನ್ನು ಹೊರತುಪಡಿಸಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ತೆರೆದಿರುತ್ತದೆ ಎಂದು ಮುಖ್ಯ ಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದರು. ಕಾಸರಗೋಡಿನಲ್ಲಿ ಕೆಲಸದ ಸಮಯ ಬೆಳಗ್ಗೆ 11ರಿಂದ 5ರ ತನಕ ಈ ಹಿಂದೆ ಇತ್ತು.