ಕೊರೋನ: ಖಾಲಿ ಹೊಟ್ಟೆಯ ನಡಿಗೆ ವೀರರಿಗೆ ಗೂಡು ಸೇರುವ ತವಕ...
ಲಕ್ನೋ, ರಾಂಚಿ, ಹೊಸದಿಲ್ಲಿ, ಮಾ.27: ಮನ್ನಾಲಾಲ್ ಕಳೆದ 24 ಗಂಟೆಗಳಲ್ಲಿ ಆಹಾರ ಅಥವಾ ನೀರಿಲ್ಲದೇ 100 ಕಿಲೋಮೀಟರ್ ನಡೆದಿದ್ದಾರೆ. ಮನೆ ಸೇರಲು ಇನ್ನೂ 150 ಕಿಲೋಮೀಟರ್ ಪಾದಯಾತ್ರೆ ಬಾಕಿ ಇದೆ.
ಕಾನ್ಪುರದಿಂದ ಸುಮಾರು 250 ಕಿಲೋಮೀಟರ್ ದೂರದ ಬಹರೀಚ್ ಜಿಲ್ಲೆಯ ಗಾಟ್ಲಾಬೆಲಿ ಗ್ರಾಮವನ್ನು ಸೇರಿಕೊಳ್ಳುವ ತವಕದಿಂದ ನಡಿಗೆ ಆರಂಭಿಸಿದ ಎಂಟು ಮಂದಿಯ ಪೈಕಿ ಲಾಲ್ (48) ಕೂಡಾ ಒಬ್ಬರು.
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದಲ್ಲದೇ, ನಿರ್ಮಾಣ ಸ್ಥಳದಲ್ಲಿ ವಾಸಿಸಲು ಅವಕಾಶ ಇಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಈ ಎಂಟು ಮಂದಿ ಬುಧವಾರ ಮುಂಜಾನೆ 3ಕ್ಕೆ ಕಾಲ್ನಡಿಗೆ ಆರಂಭಿಸಿದ್ದರು. ಮಂಗಳವಾರ ರಾತ್ರಿಗೇ ನಮ್ಮಲ್ಲಿದ್ದ ಹಣ ಖರ್ಚಾಯಿತು. ಆದ್ದರಿಂದ ನಾವು ಮನೆಗೆ ಹೋಗಲು ನಿರ್ಧರಿಸಿದೆವು ಎಂದು ಗುಡ್ಡೂ (15) ಹೇಳುತ್ತಾನೆ. ಮೊದಲು 20 ಕಿಲೋಮೀಟರ್ ದೂರದ ಸ್ಥಳೀಯ ರೈಲು ನಿಲ್ದಾಣಕ್ಕೆ ಧಾವಿಸಿದರು. ಆದರೆ ಅದು ಮುಚ್ಚಿದ ಕಾರಣ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ ನಡಿಗೆ ಆರಂಭಿಸಿದರು.
ಬಟ್ಟೆ ಮತ್ತು ಸಾಮಾನು ಸರಂಜಾಮುಗಳ ಪುಟ್ಟ ಗಂಟನ್ನು ಹೆಗಲಲ್ಲಿ ಹೊತ್ತು ಲಾಲ್ ಹಾಗೂ ಇತರರು 12 ಗಂಟೆ ಆಹಾರವಿಲ್ಲದೇ ನಡೆದಿದ್ದಾರೆ. ಮಂಗಳವಾರ ರಾತ್ರಿಯೇ ಅವರ ಕೊನೆಯ ಊಟ. ಕೇವಲ ನೀರು ಕುಡಿದು ಬದುಕುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಎಷ್ಟೇ ಆದರೂ ನಗರಕ್ಕಿಂತ ಹಳ್ಳಿಯೇ ಉತ್ತಮ; ನಗರದಲ್ಲಿ ಊಟವೂ ಸಿಗುವುದಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ.
ಎಲ್ಲರ ಬಳಿಯೂ ಹೊರಡುವಾಗ ಇದ್ದುದು 50ರಿಂದ 200 ರೂಪಾಯಿ. ಕ್ರಮೇಣ ಬಸ್ ಆದರೂ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಕಾಲ್ನಡಿಗೆ ಅರಂಭಿಸಿದ್ದರು. ಮನೆಗೆ ಹೋದ ಮೇಲೂ ಯಾವ ಆದಾಯವೂ ಇಲ್ಲದ ಕಾರಣ ಮುಂದಿನ ಪರಿಸ್ಥಿತಿ ಕಲ್ಪಿಸಿಕೊಳ್ಳಲೂ ಅಸಾಧ್ಯ ಎಂದು 28 ವರ್ಷದ ರಾಮ್ ಅಚಲ್ ಹೇಳುತ್ತಾರೆ.
ಇದು ಈ ಎಂಟು ಮಂದಿಯ ಕಥೆಯಲ್ಲ; ಸುಮಾರು 110 ಕಿಲೋಮೀಟರ್ ನಡೆದುಕೊಂಡು ಬಂದ ಜಾರ್ಖಂಡ್ನ ಲಾತೇಹಾರ್ ಗ್ರಾಮದ ಮುನ್ನಾ ಮಾಥೊ, ಕುಟುಂಬದ ಮೂವರು ಸದಸ್ಯರೊಂದಿಗೆ ವಡೋದರದಿಂದ ಅಹ್ಮದಾಬಾದ್ಗೆ ನಡೆದುಕೊಂಡು ಬಂದ ದಶರಥ ಯಾದವ್, 10 ಗಂಟೆಯ ನಡಿಗೆ ಬಳಿಕ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಹುಟ್ಟೂರು ಸೇರಿದ ರಬೂಯಿಲ್ ಶೇಖ್ ಹೀಗೆ ಹಲವು ನಿದರ್ಶನಗಳಿವೆ.