ಲಾಕ್ ಡೌನ್ ವೇಳೆ ಜನರೊಂದಿಗೆ ತಾಳ್ಮೆಯಿಂದ ವರ್ತಿಸಿ: ಪೊಲೀಸರಿಗೆ ಮಂಗಳೂರು ಕಮಿಷನರ್ ಡಾ.ಹರ್ಷ ಸೂಚನೆ

ಮಂಗಳೂರು, ಮಾ.27: ಲಾಕ್ ಡೌನ್ ವೇಳೆ ಜನರೊಂದಿಗೆ ಶಾಂತಚಿತ್ತರಾಗಿ, ತಾಳ್ಮೆಯಿಂದ ವರ್ತಿಸಬೇಕು. ಯಾವುದೇ ಕಾರಣಕ್ಕೂ ಲಾಠಿ ಚಾರ್ಜ್ ಬೇಕಿಲ್ಲ. ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಲೇಬಾರದು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಜಾಲತಾಣಗಳಲ್ಲಿ ಡಾ.ಹರ್ಷ ಅವರು ಸೂಚನೆ ನೀಡಿದ್ದಾರೆನ್ನಲಾದ ವಾಯ್ಸ್ ಒಂದು ವೈರಲ್ ಆಗಿದೆ. ವಾಯ್ಸ್ ನಲ್ಲಿ, 'ಅಗತ್ಯ ಸಾಮಗ್ರಿಗಾಗಿ ಜನರು ಹೊರಬಂದರೆ ಅವರಿಗೆ ತೊಂದರೆ ಕೊಡಬೇಡಿ. ಅಗತ್ಯ ಸಾಮಗ್ರಿಗಳ ಗೂಡ್ಸ್ ಲಾರಿ, ವಾಹನಗಳನ್ನು ಯಾವುದೇ ಕಾರಣಕ್ಕೂ ತಡೆದು ನಿಲ್ಲಿಸಬೇಡಿ. ಆ ವಾಹನಗಳ ಚಾಲಕರನ್ನು ಪರೀಕ್ಷಿಸಿ ಅವರಿಗೆ ಜ್ವರ, ಸೋಂಕು ಇದ್ದರೆ ಮಾತ್ರ ಅವರನ್ನು ತಡೆಯಬೇಕು. ಅನಗತ್ಯವಾಗಿ ಎಲ್ಲಾ ಲಾರಿಗಳನ್ನು ಹೋಗಲು ಬಿಡದೇ ಅವರಿಗೆ ಸಮಸ್ಯೆ ಉಂಟುಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಸರಕಾರಿ ಐಡಿ ಕಾರ್ಡ್ ಇರುವವರು, ಬ್ಯಾಂಕ್ ಸಿಬ್ಬಂದಿ ಮತ್ತು ‘ಜಿ’ ನಂಬರ್ ಪ್ಲೇಟ್ ಇರುವ ವಾಹನಗಳನ್ನು ತಡೆದು ನಿಲ್ಲಿಸದೆ ಅವರನ್ನು ಬಿಡಬೇಕು. ಯಾವುದೇ ಕಾರಣಕ್ಕೂ ಕೇರಳದಿಂದ ಬರುವ ಯಾವುದೇ ವ್ಯಕ್ತಿಯನ್ನು ಒಳಗೆ ಬಿಡಲೇಬಾರದು ಮತ್ತು ಅಲ್ಲಿಂದ ಬರುವ ಅಗತ್ಯ ಸಾಮಗ್ರಿಗಳನ್ನು ತರುವ ಗೂಡ್ಸ್ ವಾಹನಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.





