ಕೊರೊನ: ರತನ್ ಟಾಟಾ 500 ಕೋಟಿ, ಅಕ್ಷಯ್ ಕುಮಾರ್ 25 ಕೋಟಿ ನೆರವು ಘೋಷಣೆ
ಮುಂಬೈ, ಮಾ. 28 : ಟಾಟಾ ಗ್ರೂಪ್ ಮುಖ್ಯಸ್ಥ ಹಿರಿಯ ಉದ್ಯಮಿ ರತನ್ ಟಾಟಾ ಅವರು ಕೊರೊನ ವೈರಸ್ ನಿಯಂತ್ರಣ ವಿರುದ್ಧದ ಹೋರಾಟಕ್ಕೆ ಟಾಟಾ ಟ್ರಸ್ಟ್ ನಿಂದ ೫೦೦ ಕೋಟಿ ರೂ. ನೆರವು ಘೋಷಿಸಿದ್ದಾರೆ.
ಕೋವಿಡ್ 19 ಸಂಕಟ ಇಡೀ ಮಾನವ ಜನಾಂಗಕ್ಕೆ ಎದುರಾಗಿರುವ ಅತ್ಯಂತ ಕಠಿಣ ಸವಾಲು. ಟಾಟಾ ಟ್ರಸ್ಟ್ ಗಳು ಹಾಗು ಟಾಟಾ ಗ್ರೂಪ್ ಕಂಪೆನಿಗಳು ಈ ಹಿಂದೆಯೂ ದೇಶಕ್ಕೆ ಅಗತ್ಯ ಬಿದ್ದಾಗಲೆಲ್ಲಾ ಸ್ಪಂದಿಸಿವೆ. ಈಗ ಅಗತ್ಯ ಈ ಹಿಂದೆಂದಿಗಿಂತಲೂ ಬಹಳ ಹೆಚ್ಚಿದೆ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನೆರವು ಘೋಷಿಸಿ ರತನ್ ಟಾಟಾ ಬರೆದಿದ್ದಾರೆ.
ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರು ತನ್ನ ಉಳಿತಾಯದಿಂದ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಗೆ ೨೫ ಕೋಟಿ ನೀಡುತ್ತೇನೆ ಎಂದು ಘೋಷಿಸಿದ್ದಾರೆ. " ಈಗ ಎಲ್ಲಕ್ಕಿಂತ ಮುಖ್ಯ ಜನರ ಜೀವ ಉಳಿಸುವುದು, ಜೀವ ಉಳಿದರೆ ಬಳಿಕ ಎಲ್ಲವೂ ಇದೆ " ಎಂದು ಅವರು ಹೇಳಿದ್ದಾರೆ.
Next Story