ಮಸೀದಿಗಳ ಮೂಲಕ ಕೊರೋನ ಸೋಂಕಿನ ಬಗ್ಗೆ ಜಾಗೃತಿ: ಎ.ಬಿ.ಇಬ್ರಾಹಿಂ
ಬೆಂಗಳೂರು, ಮಾ.29: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನ ಸೋಂಕಿನ ಬಗ್ಗೆ ಮಸೀದಿಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದ್ದು, ಪ್ರತಿ ದಿನ ಸುಮಾರು ನಾಲ್ಕು ಬಾರಿ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಸರಕಾರದ ನಿರ್ದೇಶನಗಳು, ಸಾರ್ವಜನಿಕರು ಪಾಲಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ತಿಳಿಸಿದರು.
ರವಿವಾರ ನಗರದ ಬೌರಿಂಗ್ ಆಸ್ಪತ್ರೆ ರಸ್ತೆಯಲ್ಲಿರುವ ಫಿರೋಝ್ ವೈಟ್ ಮ್ಯಾನರ್ ನಲ್ಲಿ ಧಾರ್ಮಿಕ ಮುಖಂಡರ ಜೊತೆ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ದೇಶ, ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಸಾರ್ವಜನಿಕರು ಈ ಲಾಕ್ಡೌನ್ ಕರ್ಫ್ಯೂ ಉಲ್ಲಂಘಟನೆ ಮಾಡದೆ ತಮ್ಮ ತಮ್ಮ ಮನೆಯಲ್ಲಿಯೆ ಇರಬೇಕು ಎಂದು ಮನವಿ ಮಾಡಿದರು.
ಅನಗತ್ಯವಾಗಿ ಯಾರೂ ರಸ್ತೆಗಳಲ್ಲಿ ಓಡಾಡಬಾರದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಸರಕಾರದಿಂದ ಹಾಗೂ ಆರೋಗ್ಯ ಇಲಾಖೆಯಿಂದ ನೀಡಿರುವ ನಿರ್ದೇಶನಗಳನ್ನು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಬ್ರಾಹಿಂ ಕೋರಿದರು.
ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ರಾಜ್ಯ ಸರಕಾರದಿಂದ ನಮಗೆ ಬಂದಿರುವ ಎಲ್ಲ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು. ಎ.ಬಿ.ಇಬ್ರಾಹಿಂ ಅವರು ಸೂಚಿಸಿರುವಂತೆ ಎಲ್ಲ ಮಸೀದಿಗಳಲ್ಲೂ ಜಾಗೃತಿ ಸಂದೇಶಗಳನ್ನು ಸಾರಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಮುಖವಾಗಿ ಅತ್ಯವಶ್ಯಕ ಕೆಲಸವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರವುದು, ಕೆಲಸ ಪೂರೈಸಿಕೊಂಡು ತಕ್ಷಣ ಮನೆಗೆ ಸೇರಬೇಕು. ಪ್ರತಿದಿನ ಐದು ಹೊತ್ತಿನ ನಮಾಝ್ ಅನ್ನು ಮನೆಯಲ್ಲಿಯೆ ನಿರ್ವಹಿಸುವುದು. ಯಾವುದೆ ಕಾರಣಕ್ಕೂ ಮಸೀದಿಗೆ ತೆರಳುವುದಾಗಲಿ ಅಥವಾ ನೆರೆ ಹೊರೆಯವರೊಂದಿಗೆ ಒಟ್ಟುಗೂಡಿ ಜಮಾಅತ್ ಸೇರುವುದಾಗಲಿ ಮಾಡಬಾರದು. ಹೀಗೆ ಮಾಡಿದ್ದಲ್ಲಿ ಇದು ಸರಕಾರದ ಆದೇಶಗಳ ಉಲ್ಲಂಘನೆಯಾಗಿ ಕಾನೂನಿನಡಿಯಲ್ಲಿ ಶಿಕ್ಷೆಗೆ ಒಳಗಾಗುವ ಸಂಭವವಿರುತ್ತದೆ ಎಂದು ಅವರು ಹೇಳಿದರು.
ವಿಶೇಷವಾಗಿ ಯುವ ಜನಾಂಗ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವುದು, ಬೀದಿಗಳಲ್ಲಿ ಗುಂಪು ಸೇರುವುದು, ಬೈಕ್ ಓಡಿಸುವುದು ಮುಂತಾದವುಗಳಿಂದ ದೂರವಿರಬೇಕು. ಯೂಟ್ಯೂಬ್, ವಾಟ್ಸಪ್, ಫೇಸ್ಬುಕ್, ಟ್ವಿಟರ್ಗಳಲ್ಲಿ ಬರುವ ಅನವಶ್ಯಕ ವದಂತಿಗಳನ್ನು ಹಂಚಬಾರದು. ಆದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಮಖ್ಸೂದ್ ಇಮ್ರಾನ್ ಕೋರಿದರು.
ಸರಕಾರದಿಂದ ಹಾಗೂ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸುವ ಮೂಲಕ, ಈ ಮಹಾಮಾರಿ ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಬೋರ್ಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್ ಗಡ್ಯಾಲ್,ಶಿವಾಜಿನಗರದ ಚಾರ್ ಮಿನಾರ್ ಮಸೀದಿಯ ಖತೀಬ್ ಮೌಲಾನ ಇಜಾಝ್ ಅಹ್ಮದ್ ನದ್ವಿ, ಡಾ. ತಾಹಾ ಮತೀನ್ ಉಪಸ್ಥಿತರಿದ್ದರು.