ಕಲ್ಲರ್ಪೆ ಯುವಕನಿಗೆ ಕೊರೋನ ನೆಗೆಟಿವ್
ಪುತ್ತೂರು : ಕೆಲ ದಿನಗಳ ಹಿಂದೆ ವಿದೇಶದಿಂದ ಬಂದಿದ್ದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿನ ಯುವಕನಿಗೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಈತನಿಗೆ ಕೊರೋನ ವೈರಸ್ ನೆಗೆಟಿವ್ ವರದಿಯಾಗಿದೆ. ಇದರಿಂದ ಆರ್ಯಾಪು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೊರೋನ ವೈರಸ್ ವ್ಯಾಪಕತೆಯನ್ನು ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ವಿದೇಶದಿಂದ ಆಗಮಿಸಿದ್ದ ಅವರ ಕೈಗೆ ಇಲಾಖೆಯಿಂದ ಮೊಹರು ಹಾಕಲಾಗಿತ್ತು. ಅಲ್ಲದೆ ಕೊರೋನ ಹಿನ್ನಲೆಯಲ್ಲಿ ಹೆಚ್ಚಿನ ನಿಗಾ ವಹಿಸಿ ಮನೆಯ ಒಳಗಡೆಯೇ ಉಳಿದುಕೊಂಡಿದ್ದರು. ರವಿವಾರ ರಾತ್ರಿ ವೇಳೆ ಅವರಿಗೆ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣವೇ ಕುಟುಂಬಸ್ಥರು ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಸೋಮವಾರ ಮಧ್ಯಾ ಹ್ನ ಅಂಬುಲೆನ್ಸ್ ಮೂಲಕ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದೇ ದಿನ ಕೊರೋನ ವೈರಸ್ ಸೋಂಕಿನ ಪರೀಕ್ಷೆಗೆ ಯುವಕನನ್ನು ಒಳಪಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಪರೀಕ್ಷಾ ವರದಿ ಕೈ ಸೇರಿದ್ದು ನೆಗೆಟಿವ್ ವರದಿ ಬಂದಿದೆ ಎಂದು ತಿಳಿದು ಬಂದಿದೆ.