ಲಾಕ್ ಡೌನ್ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಂದ ಹಲ್ಲೆ: ಆದಿವಾಸಿ ವ್ಯಕ್ತಿ ಮೃತ್ಯು; ಆರೋಪ

ಭೋಪಾಲ: ಲಾಕ್ ಡೌನ್ ಅಗತ್ಯ ವಸ್ತುಗಳ ಖರೀದಿಗಾಗಿ ಅಳಿಯನ ಜತೆ ವಾಹನದಲ್ಲಿ ತೆರಳುತ್ತಿದ್ದಾಗ ಪೊಲೀಸರು ಥಳಿಸಿದ ಪರಿಣಾಮ ಆದಿವಾಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಮಹೇಶ್ವರ್ ತಾಲೂಕಿನ ಗೋತಾನಿಯ ನಿವಾಸಿ ಟಿಬು ಮೇದಾ (65) ಮೃತಪಟ್ಟ ವ್ಯಕ್ತಿ. ಟಿಬು ಅಗತ್ಯ ವಸ್ತುಗಳ ಖರೀದಿಗಾಗಿ ಹೋಗುತ್ತಿದ್ದಾಗ ಪೊಲೀಸರು ಹಲ್ಲೆ ನಡೆಸಿದರು ಎಂದು ಅಳಿಯ ಸಂಜಯ್ ದೂರಿದ್ದಾರೆ. ಪೊಲೀಸರು ಲಾಠಿ ಬೀಸಿದ ವೇಳೆ ಸಂಜಯ್ ಮಾವನ ಜತೆಗಿದ್ದರು ಎನ್ನಲಾಗಿದೆ.
"ನಾವು ದಿನಸಿ ಖರೀದಿಗಾಗಿ ಅಂಗಡಿಯೊಂದರ ಮುಂದೆ ನಿಂತಿದ್ದಾಗ ಯಾವುದೇ ಎಚ್ಚರಿಕೆ ನೀಡದೇ ಪೊಲೀಸರು ಲಾಠಿ ಬೀಸಲಾರಂಭಿಸಿದರು" ಎಂದು ಸಂಜಯ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಆರೋಪಿಸಿದ್ದಾರೆ.
ಸಂಜಯ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಟಿಬು ಅವರನ್ನು ಪೊಲೀಸರು ಅಟ್ಟಾಡಿಸಿಕೊಂಡು ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಟಿಬು ಮೃತಪಟ್ಟರು ಎಂದು ಆರೋಪಿಸಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧರ್ಮಪುರಿ ಶಾಸಕ ಪಂಚಿಲಾಲ್ ಮೇದಾ ಭರವಸೆ ನೀಡಿದ್ದಾರೆ.







