ಲಾಕ್ಡೌನ್: ಉಡುಪಿ ಜಿಲ್ಲೆಯಾದ್ಯಂತ ಮನೆಗಳಲ್ಲಿಯೇ ಪಾಮ್ಸಂಡೆ ಆಚರಣೆ

ಉಡುಪಿ, ಎ.5: ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ರವಿವಾರ (ಪಾಮ್ ಸಂಡೆ)ಯನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತ ಬಾಂಧವರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿದರು.
ಕೊರೋನ ಭೀತಿಯ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಸೂಚನೆಯಂತೆ ಈಗಾಗಲೇ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ. ಆದುದರಿಂದ ಪಾಮ್ ಸಂಡೆಯ ಪ್ರಯುಕ್ತ ಎಲ್ಲಾ ಚರ್ಚುಗಳಲ್ಲಿ ಆಯಾ ಚರ್ಚಿನ ಧರ್ಮಗುರುಗಳು ಮಾತ್ರ ಚರ್ಚಿನಲ್ಲಿ ಏಕಾಂಗಿಯಾಗಿ ಪಾಮ್ ಸಂಡೆಯ ಪ್ರಾರ್ಥನಾ ವಿಧಿಯನ್ನು ನೇರವೇರಸಿದರು.
ಯಾವುದೇ ಚರ್ಚುಗಳನ್ನು ಭಕ್ತಾದಿಗಳಿಗೆ ತೆರೆಡಿಡದೆ ಮುಚ್ಚಲಾಗಿತ್ತು. ಜಿಲ್ಲೆಯ ಆಯ್ದ ಚರ್ಚುಗಳಲ್ಲಿ ಪಾಮ್ ಸಂಡೆಯ ಪ್ರಾರ್ಥನಾ ವಿಧಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಿ ಮನೆಯಲ್ಲಿ ರುವ ಭಕ್ತರಿಗೆ ವೀಕ್ಷಿಸಲು ವ್ಯವಸ್ಥೆಗೊಳಿಸಲಾಗಿತ್ತು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೆಸ್ತರ ಪವಿತ್ರ ಸಪ್ತಾಹ ಆರಂಭ ಗೊಳ್ಳುತ್ತದೆ. ಯೇಸುಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೆಸ್ತರು ಮೆರವಣಿಗೆ ಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಲಾಕ್ಡೌನ್ ಕಾರಣದಿಂದಾಗಿ ಎಲ್ಲಾ ಚರ್ಚುಗಳು ಭಕ್ತಾದಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು.
ಪವಿತ್ರ ಸಪ್ತಾಹವು ಕ್ರೆಸ್ತರಿಗೆ ಅತೀ ಮಹತ್ವದಾಗಿದ್ದು, ಗುರುವಾರ ಯೇಸು ಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದ್ದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್ ಪ್ರೈ ಡೆ ಆಚರಿಸಿ ಇಡೀ ದಿನವನ್ನು ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ರವಿವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಈ ಎಲ್ಲಾ ದಿನಗಳನ್ನು ಲಾಕ್ಡೌನ್ ಹಿನ್ನಲೆಯಲ್ಲಿ ಭಕ್ತಾದಿಗಳು ಮನೆ ಯಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸಲು ಧರ್ಮಾಧ್ಯಕ್ಷರು ಸೂಚಿಸಿದ್ದಾರೆ.







