ಪೂರ್ವಾನುಮತಿ ಪಡೆಯದೆ ಸಾಮಗ್ರಿ ಹಂಚುವಿಕೆ ನಿಷೇಧ: ಡಿಸಿ ಜಿ.ಜಗದೀಶ್
ಉಡುಪಿ, ಎ.5: ಯಾವುದೇ ಪೂರ್ವಾನುಮತಿ ಇಲ್ಲದೆ ಮನೆ ಮನೆಗೆ ತೆರಳಿ ದಿನಸಿ ಸಾಮಾಗ್ರಿ/ಅವಶ್ಯಕ ಸಾಮಗ್ರಿಗಳನ್ನು ಹಂಚುವುದನ್ನು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲಾಡಳಿತಕ್ಕೆ ದೈನಂದಿನ ದಿನಸಿ/ಅವಶ್ಯಕ ಸಾಮಗ್ರಿಗಳನ್ನು ಸ್ವಇಚ್ಛೆಯಿಂದ ನೀಡ ಬಯಸುವ ದಾನಿಗಳು / ಸಂಘ ಸಂಸ್ಥೆಗಳು/ ಸಾರ್ವಜನಿಕರು ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಘಂಟೆ ಯವರೆಗೆ ನೀಡಬಹುದು ಎಂದು ಈಗಾಗಲೇ ತಿಳಿಸಲಾಗಿದೆ.
ಆದರೂ ಕೆಲವೊಂದು ವ್ಯಕ್ತಿಗಳು/ಸಂಸ್ಥೆಗಳು ಮನೆ ಮನೆಗೆ ನೇರ ತೆರಳಿ ದೈನಂದಿನ ದಿನಸಿ/ ಅವಶ್ಯಕ ಸಾಮಗ್ರಿಗಳನ್ನು ಯಾವುದೇ ಅನುಮತಿ ಇಲ್ಲದೆ ಹಾಗೂ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ಗುಂಪು ಗುಂಪಾಗಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ತೆರಳಿ ಸಾಮಗ್ರಿ ಗಳನ್ನು ಹಂಚುತ್ತಿರುವ ಬಗ್ಗೆ ಜಿಲಾ್ಲಡಳಿತಕ್ಕೆ ದೂರುಗಳು ಬರುತ್ತಿವೆ.
ಇದರಿಂದಾಗಿ ಲಾಕ್ಡೌನ್/ನೀಷೇಧಾಜ್ಞೆಯ ಉಲ್ಲಂಘನೆಯಾಗುತ್ತಿದೆ. ಅಲ್ಲದೇ ಲಾಕ್ಡೌನ್ ನ ಮೂಲ ಉದ್ದೇಶವೇ ಬುಡಮೇಲಾಗುತ್ತದೆ ಹಾಗೂ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಇಂತಹ ವಿಪತ್ತಿನ ಸಮಯದಲ್ಲಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಸಂಘ ಸಂಸ್ಥೆಗಳು ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆದುದರಿಂದ ಸ್ವಇಚ್ಛೆಯಿಂದ ದಿನಸಿ ಸಾಮಗ್ರಿ/ ಅವಶ್ಯಕ ಸಾಮಗ್ರಿಗಳನ್ನು ನೀಡಬಯಸುವ ದಾನಿಗಳು/ಸಂಘ ಸಂಸ್ಥೆಗಳು/ಸಾರ್ವಜನಿಕರು ಕಡ್ಡಾಯ ವಾಗಿ ಸಾಮಾಗ್ರಿಗಳನ್ನು ನೇರವಾಗಿ ವಿತರಣೆ ಮಾಡದೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಹಸ್ತಾಂತರಿಸುವಂತೆ ಕೋರಲಾಗಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಮನೆ ಮನೆಗೆ ತೆರಳಿ ದಿನಸಿ ಸಾಮಗ್ರಿ/ ಅವಶ್ಯಕ ಸಾಮಗ್ರಿಗಳನ್ನು ಹಂಚುವುದನ್ನು ನಿಷೇಧಿಸಿದ್ದು, ಉಲ್ಲಂಘನೆ ಮಾಡಿದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.







