ದ.ಕ. ಜಿಲ್ಲೆಯಲ್ಲಿ 48,000 ಕ್ವಿಂಟಾಲ್ ಪಡಿತರ ಅಕ್ಕಿ ವಿತರಣೆ
ಸುಳ್ಯ ತಾಲೂಕಿಗೆ ಒಟಿಪಿ ವಿನಾಯಿತಿ
ಮಂಗಳೂರು, ಎ.5: ಕೊರೋನ ಹಿನ್ನೆಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಎ.2ರಿಂದ ಒಟ್ಟಿಗೆ ವಿತರಿಸಲಾಗುತ್ತಿದ್ದು, ಇದುವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ ದ.ಕ. ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ.
ದ.ಕ.ಜಿಲ್ಲೆಯಲ್ಲಿ 2.73 ಲಕ್ಷ ಕಾರ್ಡುದಾರರಿದ್ದು, ರವಿವಾರದವರೆಗಿನ ಅಂಕಿ ಅಂಶದ ಪ್ರಕಾರ ಸುಮಾರು 98,000 ಕಾರ್ಡುದಾರರಿಗೆ 48,000 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ. ಬಿಪಿಎಲ್ ಕುಟುಂಬದ ಪ್ರತೀ ಸದಸ್ಯರಿಗೆ 10 ಕೆಜಿ ಅಕ್ಕಿ, ಅಂತ್ಯೋದಯ ಕುಟುಂಬಗಳಿಗೆ ಪ್ರತೀ ಕಾರ್ಡ್ಗೆ 70 ಕೆಜಿ ಹಾಗೂ ಎಪಿಎಲ್ ಕಾರ್ಡುಗಳಿಗೆ 20 ಕೆಜಿ ಅಕ್ಕಿ ನೀಡಲಾಗುತ್ತಿದೆ.
ಸುಳ್ಯ ತಾಲೂಕಿಗೆ ಒಟಿಪಿ ವಿನಾಯಿತಿ: ಸುಳ್ಯ ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು, ಮೊಬೈಲ್ ಒಟಿಪಿ ಜನರೇಟ್ ಆಗುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ಕಾರ್ಡ್ದಾರರು ಸರದಿ ಸಾಲಿನಲ್ಲಿ ಬಹಳ ಹೊತ್ತು ನಿಲ್ಲಬೇಕಾಗಿ ಬರುತ್ತಿದೆ. ಅಲ್ಲದೆ ಇದು ‘ಸಾಮಾಜಿಕ ಅಂತರ’ ಕಾಪಾಡಲು ಅಡ್ಡಿಯಾಗುತ್ತಿದ್ದು ಮತ್ತು ಕೊರೋನ ನಿಯಂತ್ರಣಕ್ಕೆ ಕಷ್ಟಕರವಾಗಿರುವುದರಿಂದ ಸುಳ್ಯ ತಾಲೂಕಿನಲ್ಲಿ ಪಡಿತರ ಪಡೆಯುವಾಗ ಒಟಿಪಿ ಕಡ್ಡಾಯದಿಂದ ವಿನಾಯಿತಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಒಟಿಪಿ ಮೂಲಕವೇ ಪಡಿತರ ಸುಗಮವಾಗಿ ನಡೆಯುತ್ತಿರುವುದರಿಂದ ಹಿಂದಿನಂತೆ ಒಟಿಪಿ ಮೂಲಕ ಪಡಿತರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.







