ಕ್ವಾರಂಟೈನ್ಗೆ ಒಳಪಟ್ಟಿದ್ದಕ್ಕೆ ಸಾಮಾಜಿಕ ಬಹಿಷ್ಕಾರ: ವ್ಯಕ್ತಿ ಆತ್ಮಹತ್ಯೆ
ಶಿಮ್ಲ, ಎ.5: ಕೊರೋನ ವೈರಸ್ ಸೋಂಕಿನ ಪರೀಕ್ಷೆ ಬಳಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ರವಿವಾರ ನಡೆದಿದೆ.
ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಉನಾದ ಬಂಗಾಡ ಗ್ರಾಮದ ನಿವಾಸಿ ಮುಹಮ್ಮದ್ ದಿಲ್ಶದ್ ಎಂಬಾತನನ್ನು ಕಳೆದ ಕೆಲ ದಿನಗಳಿಂದ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಬಳಿಕ ನೆಗೆಟಿವ್ ವರದಿ ಬಂದ ಕಾರಣ ಆತನನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಗೆ ತಂದು ಬಿಟ್ಟಿದ್ದರು.
ಆದರೆ ದಿಲ್ಶದ್ ಕೊರೋನ ಶಂಕಿತ ರೋಗಿಯಾಗಿದ್ದು, ಈತನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಗ್ರಾಮದಲ್ಲಿ ಸುದ್ದಿ ಹರಡಿದೆ. ಈತ ಗ್ರಾಮಕ್ಕೆ ಹಿಂದಿರುಗಿದಾಗ ಈತನಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಅದರಿಂದ ನೊಂದ ದಿಲ್ಶದ್ ಮನೆಯ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಡಿಜಿಪಿ ಸೀತಾರಾಮ ಮರ್ಡಿ ಹೇಳಿದ್ದಾರೆ. ಈತನಿಗೆ ಬಹಿಷ್ಕಾರ ವಿಧಿಸಿದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿರುವ ಡಿಜಿಪಿ, ಸಾಮಾಜಿಕ ಅಂತರ ಎಂದರೆ ಸಾಮಾಜಿಕ ತಾರತಮ್ಯವಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.