ಕೊರೋನ ಸೋಂಕಿಗೆ ಕಾರ್ಕಳ ಮೂಲದ ವ್ಯಕ್ತಿ ಮುಂಬೈಯಲ್ಲಿ ಬಲಿ
ಮುಂಬಯಿ, ಎ.6: ಕೊರೋನ ವೈರಸ್ ಸೋಂಕು ದೃಢಗೊಂಡಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ವ್ಯಕ್ತಿಯೊಬ್ಬರು ಮುಂಬೈಯಲ್ಲಿ ರವಿವಾರ ಮೃತಪಟ್ಟಿದ್ದಾರೆ.
ಮೂಲತಃ ಕಾರ್ಕಳ ತಾಲೂಕು ಕೆಮ್ಮಣ್ಣುಗುಂಡಿ (ರಾಮಸಮುದ್ರ) ನಿವಾಸಿ ರೊನಾಲ್ಡ್ ಡಿಮೆಲ್ಲೊ(60) ಮೃತಪಟ್ಟವರು.
ಇವರು ಮುಂಬೈಯ ಕೊಲಬಾ ಎಂಬಲ್ಲಿರುವ ಪ್ರತಿಷ್ಠಿತ ತಾರಾ ಹೊಟೇಲು ತಾಜ್ಮಹಲ್ ಪ್ಯಾಲೇಸ್ನಲ್ಲಿ ಸುಮಾರು 40 ವರ್ಷಗಳಿಂದ ದುಡಿಯುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೊನಾಲ್ಡ್ ಕಳೆದ ವಾರ ಡಯಾಲಿಸಿಸ್ಗಾಗಿ ಇಲ್ಲಿನ ನಲ್ಲಸೋಫರಾ ಪಶ್ಚಿಮದಲ್ಲಿನ ರಿದ್ಧಿ ವಿನಾಯಕ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಕೊರೋನ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ತತ್ಕ್ಷಣ ಆಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಿಸಲಾಗಿತ್ತು. ಅವರಲ್ಲಿ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಅವರು ಕೊನೆಯುಸಿರೆಳೆದಿದ್ದಾರೆ. ರವಿವಾರ ರಾತ್ರಿಯೇ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಅಧಿಕಾರಿಗಳು ಅವರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೊನಾಲ್ಡ್ರ ಪತ್ನಿ ಹಾಗೂ ಓರ್ವ ಪುತ್ರನನ್ನು ಹೋಂ ಕಾರಂಟೈನ್ನಲ್ಲಿರಲು ಆರೋಗ್ಯ ಇಲಾಖಾಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ