ಮೈಸೂರಿನಲ್ಲಿ ಮೊದಲ ಕೊರೋನ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖ: ಜಿಲ್ಲಾಧಿಕಾರಿ
ಸಾಂದರ್ಭಿಕ ಚಿತ್ರ
ಮೈಸೂರು,ಎ.7: ಮೈಸೂರಿನಲ್ಲಿ ಮೊದಲ ಕೊರೋನ ಸೋಂಕು ದೃಢಪಟ್ಟ ವ್ಯಕ್ತಿ ಸಂಪೂರ್ಣ ಗುಣಮುಖವಾಗಿದ್ದು ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕೃತವಾಗಿ ಘೋಷಿಸಿದ್ದಾರೆ.
ಮೈಸೂರಿಗರನ್ನು ಚಿಂತೆಗೀಡು ಮಾಡಿದ್ದ ಮೊದಲ ಕೊರೋನ ಸೋಂಕು ಪೀಡಿತ ವ್ಯಕ್ತಿಗೆ ಕಳೆದ ಇಪ್ಪತ್ತೈದು ದಿನಗಳಿಂದ ನೂತನ ಕೋವಿಡ್-19 ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ನೀಡಲಾಗಿತ್ತು. ಅವರ ಕ್ವಾರಂಟೈನ್ ಅವಧಿ ಮುಗಿದ ಹಿನ್ನಲೆಯಲ್ಲಿ ಮಂಗಳವಾರ ಅವರನ್ನು ಆಸ್ಪತ್ರೆಯ ನಿಯಮಗಳನುಸಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದರಿಂದ 35 ಇದ್ದ ಕೊರೋನಾ ಸೋಂಕಿತರ ಸಂಖ್ಯೆ 34ಕ್ಕೆ ಇಳಿದಂತಾಗಿದೆ.
ಮೈಸೂರು ನಿವಾಸಿ ಸುಮಾರು 35 ವರ್ಷ ವಯಸ್ಸಿನ ಈ ವ್ಯಕ್ತಿ ದುಬೈಯಿಂದ ವಿಮಾನ ಮೂಲಕ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ಖಾಸಗಿ ಕಾರಿನಲ್ಲಿ ಮೈಸೂರಿಗೆ ಆಗಮಿಸಿದ್ದಾರೆ. ಮಾರ್ಗ ಮಧ್ಯೆ ಮಂಡ್ಯ ಬಳಿ ಕಾಫಿಕುಡಿಯಲು ನಿಲ್ಲಿಸಿದ್ದು ಬಿಟ್ಟರೆ ಮೈಸೂರಿಗೆ ಆಗಮಿಸಿದವರೆ ನೇರವಾಗಿ ಕೆ.ಆರ್.ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾಗಿದ್ದರು.
ಇವರನ್ನು ದಾಖಲಿಸಿಕೊಂಡ ವೈದ್ಯರು ಇವರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊರೋನ ಸೋಂಕು ದೃಢಪಡುತ್ತಿದ್ದಂತೆ ಇವರಿಗೆ ಐಸೋಲೇಷನ್ನಲ್ಲಿ ಚಿಕಿತ್ಸೆ ನೀಡುತಿದ್ದರು. ಕಳೆದ 25 ದಿನಗಳಿಂದ ಇವರಿಗೆ ಕೆ.ಆರ್.ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಮತ್ತು ಕೆ.ಆರ್.ಎಸ್.ರಸೆಯಲ್ಲಿರುವ ನೂತನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಇವರು ಆರೋಗ್ಯವಾಗಿದ್ದಾರೆ ಎಂದು ದೃಢಪಟ್ಟ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಅವರನ್ನೂ ತೀವ್ರ ನಿಗಾವಹಿಸಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಚಿಕಿತ್ಸೆ ನೀಡಿದ್ದು, ಅವರನ್ನು ಮತ್ತೊಮ್ಮೆ ಪರೀಕ್ಷಿಸಿ ವರದಿ ನೆಗಟಿವ್ ಬಂದ ಹಿನ್ನಲೆಯಲ್ಲಿ ಒಂದೆರಡು ದಿನ ವೀಕ್ಷಣೆಯಲ್ಲಿಟ್ಟು ಮಂಗಳವಾರ ಮತ್ತೊಮ್ಮೆ ಅವರ ರಕ್ತ ಮತ್ತು ಘಂಟಲಿನ ಮಾದರಿಯನ್ನು ಲ್ಯಾಬ್ಗೆ ಕಳುಹಿಸಿ ಪರೀಕ್ಷಿಸಿದ ನಂತರ ಅದು ಕೂಡ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.