ಧರ್ಮ ಪ್ರಚಾರದ ಆರೋಪ: ಕಿರ್ಗಿಸ್ತಾನದ ಎಂಟು ನಾಗರಿಕರ ವಿರುದ್ಧ ಪ್ರಕರಣ ದಾಖಲು
ಬೀದರ್, ಎ.7: ಪ್ರವಾಸಕ್ಕಾಗಿ ಭಾರತಕ್ಕೆ ಬಂದು ಧರ್ಮ ಪ್ರಚಾರ ಕೈಗೊಂಡ ಆರೋಪದ ಮೇಲೆ ಕಿರ್ಗಿಸ್ತಾನದ ಎಂಟು ನಾಗರಿಕರ ವಿರುದ್ಧ ಬೀದರ್ ನಗರದ ಗಾಂಧಿಗಂಜ್ ಹಾಗೂ ಟೌನ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಲಿಸರು ಎಲ್ಲ ಎಂಟು ಜನರ ಪಾಸ್ಪೋರ್ಟ್ ಹಾಗೂ ಮೊಬೈಲ್ ಫೋನ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರೊಂದಿಗೆ ಎಷ್ಟು ಜನ ಬೀದರ್ ಜಿಲ್ಲೆಗೆ ಬಂದಿದ್ದಾರೆ ಎನ್ನುವ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ಸದ್ಯ ಕಿರ್ಗಿಸ್ತಾನದ ಎಲ್ಲ ಎಂಟು ನಾಗರಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾ.10ರಿಂದ ನಗರದಲ್ಲಿ ವಾಸವಾಗಿರುವ ಇವರು ಕೆಲ ಮಸೀದಿಗಳಿಗೆ ತೆರಳಿ ಧರ್ಮ ಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ.
ಕಿರ್ಗಿಸ್ತಾನದವರು ವೀಸಾ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರಕಾರಕ್ಕೂ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ. ಸದ್ಯ ಇವರೆಲ್ಲರೂ ನಗರದ ರಟಕಲ್ಪುರಾ ಮರ್ಕಝ್ ಮಸೀದಿಯಲ್ಲಿ ಇದ್ದಾರೆ.