ಇಂದೋರ್ ನಲ್ಲಿ ವೈದ್ಯರೊಬ್ಬರು ಕೊರೋನ ವೈರಸ್ ಗೆ ಬಲಿ
ಇಂದೋರ್, ಎ.9: ಮಹಾಮಾರಿ ಕೊರೋನ ವೈರಸ್ ಸೋಂಕಿತ ವೈದ್ಯರೊಬ್ಬರು ಬಲಿಯಾದ ಘಟನೆ ಇಂದೋರ್ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಕುಟುಂಬ ವೈದ್ಯರಾಗಿದ್ದ ಮತ್ತು ಇಂದೋರ್ನ ರೂಪ್ರಾಮ್ ನಗರದಲ್ಲಿ ವಾಸಿಸುತ್ತಿದ್ದ ಡಾ.ಶತ್ರುಘನ್ ಪಂಜವಾನಿ ಅವರನ್ನು ಪರೀಕ್ಷಿಸಿದಾಗ ಅವರಲ್ಲಿ ಕೋವಿಡ್ ಪೊಸಿಟವ್ ಕಂಡು ಬಂದಿತ್ತು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.
ಆರಂಭದಲ್ಲಿ, ಮೃತ ಪಟ್ಟ ವೈದ್ಯರನ್ನು ಗೋಕುಲ್ದಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಇಂದೋರ್ನ ಸಿಎಚ್ಎಲ್ ಅಪೊಲೊ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಬಳಿಕ ಅರಬಿಂದೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಗುರುವಾರ ಬೆಳಗ್ಗೆ 4 ಗಂಟೆಗೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಡಾ.ಶತ್ರುಘನ್ ಪಂಜವಾನಿ ನಿಧನದೊಂದಿಗೆ ಇಂದೋರ್ನಲ್ಲಿ ಸಾವಿನ ಸಂಖ್ಯೆ 22 ಕ್ಕೆ ಏರಿದೆ, ಇದುವರೆಗೆ 213 ಕೋವಿಡ್ -19 ಪೊಸಿಟಿವ್ ಪ್ರಕರಣಗಳು ವರದಿಯಾಗಿವೆ.
ಏತನ್ಮಧ್ಯೆ ಹೋಶಂಗಾಬಾದ್ನ ಇಟಾರ್ಸಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಎನ್.ಎಲ್.ಹೆಡಾ ಅವರಿಗೊ ಕೊರೋನ ವೈರಸ್ ಸೋಂಕು ಬಾಧಿಸಿದೆ. ಅವರನ್ನು ಪರೀಕ್ಷಿಸಿದಾಗ ಪೊಸಿಟವ್ ಕಂಡು ಬಂದಿದೆ. ಅವರ ಆರು ಕ್ಲಿನಿಕ್ ಸಿಬ್ಬಂದಿಯನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ, ಅವರನ್ನು ಭೇಟಿಯಾಗಿದ್ದ 200 ಮಂದಿಯನ್ನು ಕ್ವಾರೆಂಟೈನ್ ಗೆ ವರ್ಗಾಯಿಸಲಾಗಿದೆ.