ಕೊರೋನ ಸೃಷ್ಟಿಸಿದ ಆರ್ಥಿಕ ವಿಪತ್ತು ಎದುರಿಸಲು ಭಾರತಕ್ಕೆ ಎಡಿಬಿಯಿಂದ 16,716 ಕೋಟಿ ರೂ. ನೆರವು
ಹೊಸದಿಲ್ಲಿ, ಎ.11: ದೇಶದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನ ವೈರಸ್ ಹಾವಳಿಯಿಂದಾದ ಆರ್ಥಿಕ ದುಷ್ಪರಿಣಾಮವನ್ನು ಎದುರಿಸಲು, ಭಾರತಕ್ಕೆ ಸಹಾಯಹಸ್ತ ಚಾಚಿರುವ ಏಶ್ಯ ಅಭಿವೃದ್ಧಿ ಬ್ಯಾಂಕ್ 2.2 ಶತಕೋಟಿ ಡಾಲರ್ (ಸುಮಾರು 16,716 ಕೋಟಿ ರೂ.)ಗಳ ನೆರವನ್ನು ಘೋಷಿಸಿದೆ.
ಏಶ್ಯ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸಾಟಾಗು ಅಸಾಕಾವಾ ಅವರು ಶುಕ್ರವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದೂರವಾಣಿ ಕರೆ ಮಾಡಿ ಭಾರತಕ್ಕೆ ಈ ಬೃಹತ್ ನೆರವಿನ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ತುರ್ತು ಆರೋಗ್ಯ ಕಾರ್ಯಕ್ರಮ, ಬಡವರಿಗೆ 1.7 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಯೋಜನೆ ಹಾಗೂ ಉದ್ಯಮವಲಯಕ್ಕೆ ತೆರಿಗೆ ರಿಯಾಯಿತಿ ಸೇರಿದಂತೆ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸುವ ಮೂಲಕ ಭಾರತವು ಕೊರೋನಾ ಪಿಡುಗಿನ ವಿರುದ್ಧ ಪ್ರಬಲವಾದ ಪ್ರತಿಕ್ರಿಯೆ ತೋರಿಸಿರುವುದನ್ನು ಅವರು ಶ್ಲಾಘಿಸಿದರು.
ಭಾರತದ ತುರ್ತು ಅಗತ್ಯಗಳನ್ನು ಬೆಂಬಲಿಸುವಲ್ಲಿ ಎಡಿಬಿಯು ಬದ್ಧತೆಯನ್ನು ಹೊಂದಿದೆ. ಬಡವರು,ಅಸಂಘಟಿತ ವಲಯದ ಕಾರ್ಮಿಕರು, ಸಣ್ಣ,ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಹಾಗೂ ಹಣಕಾಸು ವಲಯದ ಮೇಲೆ ಕೊರೋನಾ ಸೃಷ್ಟಿಸಿರುವ ಆರ್ಥಿಕ ದುಷ್ಪರಿಣಾಮವನ್ನು ಹೋಗಲಾಡಿಸಲು, ಎಡಿಬಿಯು ಭಾರದ ಆರೋಗ್ಯ ವಲಯಕ್ಕೆ ತಕ್ಷಣವೇ 2.2 ಶತಕೋಟಿ ಡಾಲರ್ ನೆರವನ್ನು ನೀಡಲಿದೆಯೆಂದು ಅಸಾಕಾವಾ ತಿಳಿಸಿದ್ದಾರೆ.
ಒಂದು ವೇಳೆ ಭಾರತಕ್ಕೆ ಅಗತ್ಯವಿದ್ದಲ್ಲಿ ಎಡಿಬಿಯು ನೆರವಿನ ಮೊತ್ತವನ್ನು ಹೆಚ್ಚಿಸಲೂ ಸಿದ್ಧವಿದೆಯೆಂದು ಅವರು ತಿಳಿಸಿದ್ದಾರೆ. 2021-21 ಸಾಲಿನಲ್ಲಿ ಭಾರತದ ಬೆಳವಣಿಗೆ ದರವು ಶೇ.4ಕ್ಕೆ ಕುಸಿಯುವ ಸಾಧ್ಯತೆಯಿದೆಯೆಂಜು ಏಶ್ಯ ಅಭಿವೃದ್ಧಿ ಬ್ಯಾಂಕ್ ಕಳೆದ ವಾರ ಪ್ರಕಟಿಸಿದ ಸಮೀಕ್ಷಾ ವರದಿಯೊಂದರಲ್ಲಿ ತಿಳಿಸಿತ್ತು.