ಪಕ್ಷದ ಹಂಗಿಗೆ ಬೀಳದೆ ರಾಜ್ಯದ ಹಿತರಕ್ಷಣೆಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಿ: ಬಿಎಸ್ವೈಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು, ಎ. 11: ರಾಜ್ಯಗಳ ಅಧಿಕಾರವನ್ನು ಒಂದೊಂದಾಗಿ ಕಿತ್ತುಕೊಂಡು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಪ್ರಧಾನಿ ಮೋದಿ ಅವರ ಸರ್ವಾಧಿಕಾರವನ್ನು ಪಕ್ಷಾತೀತವಾಗಿ ಖಂಡಿಸಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಂಗಿಗೆ ಬೀಳದೆ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿ ಅನ್ಯಾಯದ ವಿರುದ್ಧ ದನಿ ಎತ್ತುವ ಮೂಲಕ ದಿಟ್ಟತನ ತೋರಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಕೊರೋನ ವೈರಸ್ ಸೋಂಕಿತ ವೈದ್ಯರು ಅಗತ್ಯವಾದ ಪಿಪಿಇ ಕಿಟ್, ಎನ್-95 ಮಾಸ್ಕ್ ಇಲ್ಲದೆ ಪ್ರಾಣ ಭಯದಲ್ಲಿದ್ದಾರೆ. ಈ ಸಲಕರಣೆಗಳನ್ನು ಖರೀದಿಸದಂತೆ ರಾಜ್ಯ ಸರಕಾರಗಳ ಕೈಕಟ್ಟಿ ಹಾಕಿರುವ ಪ್ರಧಾನಿ ಮೋದಿ ಸರಕಾರ ತಾನೂ ತುರ್ತಾಗಿ ಖರೀದಿಸಿ ಪೂರೈಸದೆ ವೈದ್ಯರು-ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ' ಎಂದು ಟೀಕಿಸಿದ್ದಾರೆ.
ಕೊರೋನ ವೈರಸ್ ಸೋಂಕಿತ ವೈದ್ಯರ ಸುರಕ್ಷತಾ ಸಲಕರಣೆ ಪಿಪಿಇ ಕಿಟ್, ಎನ್-95 ಮಾಸ್ಕ್ ಗಳು ಮತ್ತು ರೋಗಿಗಳ ವೆಂಟಿಲೇಟರ್ ಗಳನ್ನು ರಾಜ್ಯಗಳ ಬದಲಿಗೆ ತಾನೇ ಖರೀದಿಸಿ ಪೂರೈಸುವುದಾಗಿ ಕೇಂದ್ರ ಸರಕಾರ ಆದೇಶ ನೀಡಿರುವುದು ಖಂಡನೀಯ. ಅನಗತ್ಯವಾದ ಈ ವಿಳಂಬದಿಂದ ಕೊರೋನ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.





