2 ವಾರಗಳ ಕಾಲ ಲಾಕ್ಡೌನ್ ಮುಂದುವರಿಸಲು ಪ್ರಧಾನಿ, ಸಿಎಂಗಳ ಒಪ್ಪಿಗೆ
ಹೊಸದಿಲ್ಲಿ, ಎ.11: ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಶನಿವಾರ ಕನಿಷ್ಠ 13 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಹೇರಲಾಗಿರುವ ದೇಶವ್ಯಾಪಿ ಲಾಕ್ಡೌನ್ ಅನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಿಸುವ ಸುಳಿವನ್ನು ನೀಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಇನ್ನಷ್ಟು ಅವಧಿಗೆ ಲಾಕ್ಡೌನ್ ವಿಸ್ತರಣೆಗೆ ಒಲವು ವ್ಯಕ್ತಪಡಿಸಿದ್ದಾರೆ. ನಿಗದಿಯಂತೆ 21 ದಿನಗಳ ಲಾಕ್ಡೌನ್ ಮಂಗಳವಾರ ಅಂತ್ಯಗೊಳ್ಳಲಿತ್ತು.
“ಪ್ರಧಾನಿಯವರು ಲಾಕ್ಡೌನ್ ವಿಸ್ತರಿಸುವ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ನಾವು ಬೇಗನೆ ಲಾಕ್ಡೌನ್ ಆರಂಭಿಸಿದ್ದರಿಂದ ಇಂದು ಭಾರತದ ಸ್ಥಿತಿ ಹಲವಾರು ಶ್ರೀಮಂತ ರಾಷ್ಟ್ರಗಳಿಗಿಂತ ಉತ್ತಮವಾಗಿದೆ. ಲಾಕ್ಡೌನ್ನ್ನು ಈಗ ಹಿಂದೆಗೆದುಕೊಂಡರೆ ಅದರ ಎಲ್ಲ ಲಾಭಗಳು ವ್ಯರ್ಥಗೊಳ್ಳುತ್ತವೆ. ಹೀಗಾಗದಿರಲು ಲಾಕ್ಡೌನ್ ವಿಸ್ತರಣೆ ಮುಖ್ಯವಾಗಿದೆ” ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಭೆಯ ಬಳಿಕ ಟ್ವೀಟಿಸಿದ್ದಾರೆ.
ಒಡಿಶಾ ಮತ್ತು ಪಂಜಾಬ್ ಈಗಾಗಲೇ ಲಾಕ್ಡೌನ್ ವಿಸ್ತರಣೆಯನ್ನು ಪ್ರಕಟಿಸಿವೆ. ಲಾಕ್ಡೌನ್ ವಿಸ್ತರಣೆಗೆ ತನ್ನ ಆಕ್ಷೇಪವಿಲ್ಲವೆಂದು ಬಿಹಾರ ಸರಕಾರವು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಆದರೆ ಗ್ರಾಮೀಣ ನಿರ್ಮಾಣ ಚಟುವಟಿಕೆಗಳು ಮತ್ತು ನೆರೆ ಪರಿಹಾರ ಕಾಮಗಾರಿಗಳಿಗೆ ವಿನಾಯಿತಿಯನ್ನು ಮುಂದುವರಿಸುವಂತೆ ಕೋರಿಕೊಂಡಿದೆ. ಕಳೆದ ವರ್ಷ ಭಾರೀ ನೆರೆಗೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಈಗಲೂ ಪುನರ್ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ.
ವೀಡಿಯೊ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದ ಹೆಚ್ಚಿನ ಮುಖ್ಯಮಂತ್ರಿಗಳು ಲಾಕ್ಡೌನ್ನ್ನು ಶೀಘ್ರವೇ ಹಿಂದೆಗೆದು ಕೊಂಡರೆ ಕೊರೋನ ವೈರಸ್ ಪ್ರಕರಣಗಳಲ್ಲಿ ಏರಿಕೆಯನ್ನು ನಿಭಾಯಿಸಲು ರಾಜ್ಯಗಳಲ್ಲಿ ಅಗತ್ಯ ಹೆಚ್ಚಿನ ಸಂಪನ್ಮೂಲಗಳ ಕೊರತೆಯಾಗಬಹುದು ಎಂಬ ಅಂಶವನ್ನು ಬೆಟ್ಟು ಮಾಡಿದ್ದರು.
ಮೋದಿಯವರು ಲಾಕ್ಡೌನ್ ವಿಸ್ತರಣೆಯನ್ನು ಘೋಷಿಸಲು ಮತ್ತೊಮ್ಮೆ ದೇಶವನ್ನುದ್ದೇಶಿಸಿ ಟಿವಿ ಭಾಷಣವನ್ನು ಮಾಡುವ ಸಾಧ್ಯತೆಯಿದೆ.
ಕೈಗಾರಿಕೆಗಳು ಹಂತ ಹಂತವಾಗಿ ಪುನರಾರಂಭಗೊಳ್ಳಲು ತಾನು ಅವಕಾಶ ನೀಡುವುದಾಗಿ ಮೋದಿ ಸಭೆಯಲ್ಲಿ ತಿಳಿಸಿದರು.
‘ದಯವಿಟ್ಟು ಲಾಕ್ಡೌನ್ ವಿಸ್ತರಿಸಿ. ಕೊರೋನ ವೈರಸ್ ನಿಭಾಯಿಸಲು ನಮಗೆ ಮೂಲಸೌಕರ್ಯಗಳ ಕೊರತೆಯಿಲ್ಲ. ಆದರೆ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಪ್ರಶ್ನೆಯಾಗಿದೆ. ಪ್ರಧಾನಿಯವರು ಯಾವಾಗಲೂ ರಾಜ್ಯಗಳ ಸಲಹೆಗಳನ್ನು ಸ್ವಾಗತಿಸಿದ್ದಾರೆ ’ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರೆ, ದೇಶವ್ಯಾಪಿ ಲಾಕ್ಡೌನ್ ವಿಸ್ತರಿಸುವುದು ಮುಖ್ಯವಾಗಿದೆ. ರಾಬಿ ಬೆಳೆಗೆ ಏಕರೂಪ ಪರಿಹಾರ ನೀತಿಯೊಂದು ಅಗತ್ಯವಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ತಿಳಿಸಿದರು.