ಸೆಂಟ್ರಲ್ ಮಾರ್ಕೆಟ್ ವರ್ತಕರಲ್ಲಿ ಗೊಂದಲ ಬೇಡ : ಶಾಸಕ ಕಾಮತ್
ಮಂಗಳೂರು, ಎ.12: ನಗರದ ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿ ಎಪಿಎಂಸಿಗೆ ತೆರಳಿರುವ ಯಾವುದೇ ಹೋಲ್ಸೇಲ್ ವ್ಯಾಪಾರಸ್ಥರು ಗೊಂದಲಕ್ಕೊಳಗಾಗಬಾರದು. ಸೆಂಟ್ರಲ್ ಮಾರುಕಟ್ಟೆ ಯಲ್ಲಿ ಲೈಸೆನ್ಸ್ ಹೊಂದಿದ್ದ ಎಲ್ಲರಿಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಾರ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿರುವ ಎಲ್ಲ ಸಗಟು -ಚಿಲ್ಲರೆ ವ್ಯಾಪಾರಿಗಳಿಗೆ ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸದ್ಯದ ಪರಿಸ್ಥಿತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸೆಂಟ್ರಲ್ ಮಾರುಕಟ್ಟೆಯಿಂದ ಈಗಾಗಲೇ ಹಲವರು ಅಲ್ಲಿಗೆ ತೆರಳಿದ್ದು ಕೆಲವರು ಇನ್ನಷ್ಟೇ ಹೋಗಬೇಕಿದೆ. ಆದರೆ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ತಾವು ಬೈಕಂಪಾಡಿಗೆ ಹೋದರೆ ಮುಂದೇನಾದೀತು ಎಂಬ ಆತಂಕ ಅಥವಾ ಗೊಂದಲಕ್ಕೆ ಯಾರೂ ಒಳಗಾಗಬಾರದು ಮತ್ತು ಕೆಲವರು ವ್ಯಾಪಾರಿಗಳಲ್ಲಿ ಗೊಂದಲ ಸೃಷ್ಟಿಸಿ ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಗೊಡಬಾರದು ಎಂದು ಶಾಸಕ ಕಾಮತ್ ಮನವಿ ಮಾಡಿದ್ದಾರೆ.
ಸೆಂಟ್ರಲ್ ಮಾರುಕಟ್ಟೆಯಲ್ಲಿ ಪರವಾನಿಗೆ ಹೊಂದಿದ ಯಾವುದೇ ಹೋಲ್ಸೇಲ್ ವ್ಯಾಪಾರಿಗೂ ತೊಂದರೆಯಾಗುವುದಿಲ್ಲ. ಎಪಿಎಂಸಿಯಲ್ಲಿ ನಮಗೆ ಅವಕಾಶ ಸಿಗುವುದಿಲ್ಲ ಎಂಬ ದೃಷ್ಟಿಕೋನ ಬೇಡ ಎಂದು ಶಾಸಕರು ವ್ಯಾಪಾರಿಗಳಿಗೆ ತಿಳಿಸಿದ್ದಾರೆ.
ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹೋಲ್ಸೇಲ್ ವ್ಯಾಪಾರಸ್ಥರು ರೀಟೈಲ್ ಅಂಗಡಿಗಳಿಗೆ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಾ ರೆಯೇ ಹೊರತು ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಗ್ರಾಹಕರು ತಮ್ಮ ಪರಿಸರದ ಅಂಗಡಿಗಳಿಂದಲೇ ಖರೀದಿಸಬೇಕೆಂದು ಅವರು ತಿಳಿಸಿದ್ದಾರೆ.
ಚಿಲ್ಲರೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ
ಸೆಂಟ್ರಲ್ ಮಾರುಕಟ್ಟೆಯೊಳಗೆ ಚಿಲ್ಲರೆ ವ್ಯಾಪಾರಸ್ಥರು , ಸಣ್ಣ ತರಕಾರಿ ವ್ಯಾಪಾರಿಗಳು , ಮಾಂಸ ಮತ್ತು ಇನ್ನಿತರ ವಸ್ತುಗಳನ್ನು ಮಾರುತ್ತಿರುವ ಹಲವರಿದ್ದಾರೆ. ಅವರೂ ಗಾಬರಿಪಡಬೇಕಾಗಿಲ್ಲ. ಅವರೆಲ್ಲರಿಗೂ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು. ತರಕಾರಿ ವ್ಯಾಪಾರಿ ಗಳಿಗೆ ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗವುದು. ಯಾರಾದರೂ ಈ ಬಗ್ಗೆ ಗೊಂದಲ ಮೂಡಿಸಿದಲ್ಲಿ ನೇರವಾಗಿ ತನ್ನನ್ನು ಸಂಪರ್ಕಿಸಬಹುದು ಎಂದು ಶಾಸಕರು ತಿಳಿಸಿದ್ದಾರೆ.







