ಲಾಕ್ಡೌನ್ ಎಫೆಕ್ಟ್: ತುತ್ತಿನ ಚೀಲ ತುಂಬಿಸಿಕೊಳ್ಳಲು ಅಸಂಘಟಿತರ ಪರದಾಟ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.13: ಲಾಕ್ಡೌನ್ ಘೋಷಣೆಯಾದ ನಂತರ ಅಸಂಘಟಿತ ಕಾರ್ಮಿಕರ ಕಷ್ಟ ಹೇಳತೀರದಾಗಿದೆ. ದುಡಿಮೆ ಇಲ್ಲದೆ ಅಸಂಘಟಿತರು ಕಂಗಾಲಾಗಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ.
ನಗರದಲ್ಲಿ ಮನೆಗೆಲಸ ಮಾಡುವವರು, ಬೀದಿ ಬದಿ ಶೇಂಗಾ, ಉರಿಗಡಲೆ ಮಾರುವವರು, ಕತ್ತರಿ, ಚಾಕು, ಈಳಿಗೆಮಣೆ, ಕುಡುಗೋಲು, ಮಿಕ್ಸರ್ ಜಾರ್ ನ ಹಲ್ಲುಗಳು, ಬೀಡಿ ಕಟ್ಟುವ ಕತ್ತರಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಸಾಣೆ ಹಿಡಿಯುವವರು ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರು ಕಂಗಾಲಾಗಿದ್ದು, ಕುಟುಂಬ ನಿರ್ವಹಣೆ ಕಷ್ಟದಾಯಕವಾಗಿದೆ.
ನಗರದಲ್ಲಿ ಚಾಕು, ಚೂರಿ ಸಾಣೆ ಹಿಡಿಯುವವರು ಸಾಕಷ್ಟು ಜನರಿದ್ದಾರೆ. ಕೊರೋನ ವೈರಸ್ ಬರುವ ಮೊದಲು ಪ್ರತಿದಿನ 2ರಿಂದ 3 ವಾರ್ಡ್ಗಳನ್ನು ಸುತ್ತಿ 300-400 ರೂ. ಸಂಪಾದಿಸುತ್ತಿದ್ದೆವು. ಆದರೆ, ಈಗ ದುಡಿಮೆಯೂ ಇಲ್ಲ. ಬೇರೆ ಊರಿಗೆ ಹೋಗಲೂ ಅವಕಾಶವಿಲ್ಲದಂತಾಗಿದೆ. ನಮ್ಮ ಬಳಿ ರೇಷನ್ ಕಾರ್ಡ್ ಕೂಡ ಇಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳು ಇವೆ. ಎಲ್ಲರೂ ಸೇರಿ ಒಂದೊತ್ತು ಊಟ ಮಾಡುವುದು ಕಷ್ಟವಾಗಿದೆ. ಕೆಲವೊಂದು ಬಾರಿ ಸಂಘ ಸಂಸ್ಥೆಯವರು ಬಂದು ಊಟ ಕೊಡುತ್ತಾರೆ. ಅದುವೇ ನಮಗೆ ಆಧಾರವಾಗಿದೆ ಎಂಬುದು ರಾಜಾಜಿನಗರದಲ್ಲಿ ವಾಸಿಸುತ್ತಿರುವ ಶೇಂಗಾ ಹಾಗೂ ಕಡಲೆ ಮಾರಿಕೊಂಡು ಜೀವನ ನಡೆಸುತ್ತಿದ್ದ ಗೌರಮ್ಮಜ್ಜಿಯ ಮಾತು.
ರಾಜ್ಯದಲ್ಲಿ ಬೆಂಗಳೂರು ಹೆಚ್ಚಿನ ಕೊರೋನ ಸೋಂಕಿತರು ಇರುವ ಪ್ರದೇಶವಾಗಿರುವುದರಿಂದ ಮನೆಗೆಲಸ ಮಾಡುವ ಸಾಕಷ್ಟು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಅವರು ಮನೆಗೆಲಸ ಮಾಡಿದರೆ ಮಾತ್ರ ಹಣ ಸಿಗುತ್ತಿತ್ತು. ಮನೆಗೆಲಸ ನಂಬಿ ಜೀವನ ನಡೆಸುತ್ತಿದ್ದ ಇವರ ಜೀವನ ದುಸ್ತರವಾಗಿದೆ. ಕೊರೋನ ಹಾವಳಿಯಿಂದ ಮನೆಗೆಲಸಕ್ಕೆ ಬರುವುದು ಬೇಡ ಅನ್ನುತ್ತಿದ್ದಾರೆ. ಇದನ್ನೆ ನಂಬಿಕೊಂಡವರಿಗೆ ಕುಟುಂಬ ನಿರ್ವಹಣೆಯ ಚಿಂತೆ ಎದುರಾಗಿದೆ.
ಇವರಂತೆ ಬೀದಿ ಬದಿ, ಬಸ್ ನಿಲ್ದಾಣ, ರೈಲು, ರೈಲು ನಿಲ್ದಾಣದಲ್ಲಿ ಹುರಿಕಡ್ಲೆ ಶೇಂಗಾ, ಲಿಂಬಾವಳಿ, ಮಿಠಾಯಿ, ಹಣ್ಣು, ಹೂ, ಮನರಂಜನಾ ಆಟಿಕೆ ಸಾಮಾನು, ಸೋಡಾ, ಜ್ಯೂಸ್ ಮಾರಾಟ ಮಾಡಿ ಪ್ರತಿನಿತ್ಯ 200-300 ರೂ. ಸಂಪಾದನೆ ಮಾಡುತ್ತಿದ್ದವರು ಲಾಕ್ಡೌನ್ನಿಂದ ಎರಡೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಗರದಲ್ಲಿ ಕೆಲ ಸಂಘ- ಸಂಸ್ಥೆಗಳು, ದಾನಿಗಳು, ಚಲನಚಿತ್ರ ನಟ-ನಟಿಯರು ಆ ಪ್ರದೇಶದ ಕಡು ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುತ್ತಿದ್ದಾರೆ. ಆದರೆ, ಈ ಕಿಟ್ಗಳು ಒಂದೇ ಕುಟುಂಬಕ್ಕೆ 2-3 ವಿತರಣೆಯಾಗುತ್ತಿವೆ. ಅಗತ್ಯವಿರುವವರಿಗೆ ಒಂದೂ ಸಿಗದಂತಾಗಿದೆ. ಅವರ ಕಷ್ಟವನ್ನು ಕೇಳುವವರೂ ಇಲ್ಲವಾಗಿದೆ.
ನಮ್ಮ ಬಳಿ ರೇಷನ್ ಕಾರ್ಡ್ ಇಲ್ಲ. ನಾವು ಊರಿಗೆ ಹೋಗಿದ್ದೆವು ಎಂಬ ಕಾರಣಕ್ಕೆ ನಮ್ಮ ರೇಷನ್ ಕಾರ್ಡ್ ರದ್ದುಗೊಳಿಸಲಾಗಿದೆ. ಪ್ರತಿದಿನ ಸಾಣೆ ಹಿಡಿದು ಬದುಕು ನಡೆಸುತ್ತಿರುವವರು ನಾವು. ಇನ್ನೂ ಕೆಲವು ದಿನ ಈ ಲಾಕ್ಡೌನ್ ಮುಂದುವರೆಯುತ್ತದೆ ಎಂದು ಜನರು ಮಾತನಾಡುತ್ತಿದ್ದಾರೆ. ಈಗಲೇ ನಮಗೆ ಬದುಕುವುದು ಕಷ್ಟವಾಗಿದೆ. ಪ್ರತಿದಿನ ಬೇರೆಯವರು ತಂದು ಕೊಡುವ ಪಾರ್ಸೆಲ್ ಊಟದ ಮೇಲೆ ನಾವು ಅವಲಂಬಿತವಾಗಿದ್ದೇವೆ. ಕೊಡೋರು ಎಷ್ಟು ದಿನಾಂತ ಕೊಟ್ಟಾರು ?
-ಶೇಖರಯ್ಯ, ಚೂರಿ, ಚಾಕು ಸಾಣೆ ಹಿಡಿಯುವವ