'ವಾರ್ತಾಭಾರತಿ' ವರದಿ ಫಲಶ್ರುತಿ: ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿದ ಪುತ್ತೂರಿನ ಯುವಕರಿಗೆ ಸ್ಪಂದನ
ವಲ್ಸಾಡ್ ಜಿಲ್ಲಾಧಿಕಾರಿಗೆ ತುರ್ತು ಪತ್ರ ರವಾನಿಸಿದ ದ.ಕ. ಜಿಲ್ಲಾಧಿಕಾರಿ

ಗುಜರಾತಿನ ರಾಜ್ ಕೋಟ್ ನಿಂದ ಹೊರಟಿದ್ದ ಇಬ್ಬರು ಪುತ್ತೂರಿನ ಯುವಕರು ಲಾಕ್ಡೌನ್ ಕಾರಣದಿಂದ ಗುಜರಾತ್-ಮಹಾರಾಷ್ಟ್ರ ಗಡಿಪ್ರದೇಶದಲ್ಲಿ ಸಿಲುಕಿ 21 ದಿವಸ ಕಾರಲ್ಲೇ ಜೀವನ ಸವೆಸಿದ ಹೃದಯ ವಿದ್ರಾವಕ ಘಟನೆಯ ಬಗ್ಗೆ ರಶೀದ್ ವಿಟ್ಲ ಅವರ ವರದಿ Varthabharati.in ನಲ್ಲಿ ಪ್ರಕಟವಾಗಿತ್ತು. ಇದಕ್ಕೆ ತಕ್ಷಣ ಸೂಕ್ತವಾಗಿ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ಗುಜರಾತಿನ ವಲ್ಸಾಡ್ ಜಿಲ್ಲಾಧಿಕಾರಿಗೆ ಪತ್ರ ರವಾನಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಮಂಗಳವಾರ (ಎ.14) ಪತ್ರ ಬರೆದಿರುವ ದ.ಕ. ಜಿಲ್ಲಾಧಿಕಾರಿ ಅವರು ವಾಲ್ಸಾಡ್ ಜಿಲ್ಲೆಯ ಅಂಬರ್ಗಾವ್ ಭಿಲಾಡ್ ತಾಲೂಕಿನ ಆರ್.ಟಿ.ಓ. ಚೆಕ್ ಪೋಸ್ಟ್ ಬಳಿ ಸಿಲುಕಿರುವ ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮುಹಮ್ಮದ್ ತಾಕೀನ್ ಮರೀಲ್ ಅವರಿಗೆ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡುವಂತೆ ವಲ್ಸಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರಶೀದ್ ವಿಟ್ಲ ಅವರ ಹೆಸರನ್ನು ಉಲ್ಲೇಖಿಸಿ ಆ ವರದಿಯ ಆಧಾರದಲ್ಲಿ ಪತ್ರ ಬರೆದಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೋನ ನೋಡಲ್ ಅಧಿಕಾರಿಯಾಗಿರುವ ಗಾಯತ್ರಿ ನಾಯಕ್ ಅವರ ವಿಶೇಷ ಸಹಕಾರದಿಂದ ಈ ಪತ್ರವನ್ನು ರವಾನಿಸಲಾಗಿದೆ.
ಭಾರತ ಲಾಕ್ಡೌನ್ ಆಗುವ 2 ದಿನ ಮೊದಲು ಗುಜರಾತಿನ ರಾಜ್ ಕೋಟಿನಿಂದ ನಿಸ್ಸಾನ್ ಮೈಕ್ರಾ ಕಾರಲ್ಲಿ ಹೊರಟ ಪುತ್ತೂರಿನ ಇಬ್ಬರು ಯುವಕರು ಗುಜರಾತ್-ಮಹಾರಾಷ್ಟ್ರ ಗಡಿ ಪ್ರದೇಶ ಗುಜರಾತಿನ ವಾಲ್ಸಾಡ್ ಜಿಲ್ಲೆಯ ಅಂಬರ್'ಗಾವ್ ಭಿಲಾಡ್ ತಾಲೂಕಿನ ಆರ್.ಟಿ.ಓ. ಚೆಕ್ ಪೋಸ್ಟ್ ಬಳಿ ಸಿಲುಕಿದ್ದಾರೆ. ಪುನಃ ರಾಜ್ ಕೋಟಿಗೆ ಹೋಗಲಾರದೇ ಈ ಕಡೆ ಪುತ್ತೂರಿಗೂ ಬರಲಾರದೇ ಕಳೆದ 22 ದಿವಸದಲ್ಲಿ ದಾರಿಬದಿ ಕಾರಿನಲ್ಲೇ ಕಾಲ ಕಳೆಯುವ ಹೀನಾಯ ಪರಿಸ್ಥಿತಿ ಎದುರಾಗಿದೆ.
ಲಾಕ್ಡೌನ್ ಘೋಷಣೆಯಾಗುವ ಮೊದಲು ರಾಜ್ ಕೋಟ್ ನಿಂದ ಕಾರಲ್ಲಿ ಹೊರಟ ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಅವರ ಸ್ನೇಹಿತ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮುಹಮ್ಮದ್ ತಾಕೀನ್ ಮರೀಲ್ ಸುಮಾರು 500 ಕಿ.ಮೀ.ಗೂ ಅಧಿಕ ಪ್ರಯಾಣಿಸಿದ ಬಳಿಕ ಲಾಕ್ ಡೌನಿನ ಅಡಕತ್ತರಿಗೆ ಸಿಲುಕಿ ಬಿದ್ದು ಚಡಪಡಿಸುತ್ತಿದ್ದಾರೆ.
ಆಶಿಕ್ ಹುಸೈನ್ ಅಡಕೆ ವ್ಯಾಪಾರದ ಉದ್ದೇಶದಿಂದ ಹಾಗೂ ರಾಜ್ ಕೋಟಲ್ಲಿ ಹೊಸ ಅಂಗಡಿ ತೆರೆಯುವ ಸಲುವಾಗಿ ಒಂದು ತಿಂಗಳ ಹಿಂದೆ ಸ್ನೇಹಿತನ ಜೊತೆ ತೆರಳಿದ್ದರು. ಆದರೆ ಇದೇ ಸಂದರ್ಭ ಕೊರೋನ ವೈರಸ್ ನ ಅಟ್ಟಹಾಸ ತಲೆದೋರಿದ್ದು ಭಾರತದಾದ್ಯಂತ ಕರ್ಫ್ಯೂ ವಿಧಿಸಲಾಯಿತು. ಕರ್ಫ್ಯೂ ನಂತರ ತರಾತುರಿಯಲ್ಲಿ ಅಲ್ಲಿಂದ ಊರಿಗೆ ಹೊರಟ ಈ ಯುವಕರು ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿ ಯಾವ ಕಡೆಯೂ ಪ್ರಯಾಣಿಸಲಾಗದೇ ಸಿಲುಕಿದ್ದರು. ಆನಂತರ ಈತನಕ ಕಾರಿನಲ್ಲೇ ವಾಸ ಮಾಡುತ್ತಿರುವ ಇಬ್ಬರು ಯುವಕರು, ಸ್ನಾನ ಶೌಚಗೃಹಕ್ಕೆ ಹತ್ತಿರದ ಹೋಟೆಲ್ ಅನ್ನೇ ಅವಲಂಬಿಸಿದ್ದು, ಅಲ್ಲಿ ಸೂಕ್ತ ಸ್ಥಳ ಇಲ್ಲದ ಕಾರಣ ಕಾರಿನಲ್ಲೇ ಮಲಗುವ ಪರಿಸ್ಥಿತಿ ಎದುರಾಗಿತ್ತು.








