ಬಾಂದ್ರಾ ಘಟನೆ: ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಎಬಿಪಿ ಚಾನೆಲ್ ವರದಿಗಾರನ ಬಂಧನ

ಮುಂಬೈ: ಮಂಗಳವಾರ ಸಂಜೆ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ವಲಸಿಗ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಉಂಟಾದ ಗೊಂದಲದ ವಾತಾವರಣಕ್ಕೆ ಕಾರಣರರಾಗಿದ್ದಾರೆಂದು ಮರಾಠಿ ಸುದ್ದಿ ವಾಹಿನಿ ಎಬಿಪಿ ಮಜ್ಹಾ ಪತ್ರಕರ್ತ ರಾಹುಲ್ ಕುಲಕರ್ಣಿಯನ್ನು ಬಂಧಿಸಲಾಗಿದೆ.
ಕೆಲ ರೈಲು ಸೇವೆಗಳು ಪುನರಾರಂಭಗೊಂಡಿವೆ ಎಂಬ ವರದಿಯನ್ನು ಅವರು ಮಾಡಿದ್ದೇ ವಲಸಿಗ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲೆಂದು ನಿಲ್ದಾಣಕ್ಕೆ ಆಗಮಿಸಲು ಕಾರಣ ಎನ್ನಲಾಗಿದೆ. ಕಾರ್ಮಿಕರನ್ನು ನಿಯಂತ್ರಿಸಲು ಕೊನೆಗೆ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಗಿ ಬಂದಿತ್ತು.
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯವರಾಗಿರುವ ಕುಲಕರ್ಣಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. "ವಲಸಿಗ ಕಾರ್ಮಿಕರಿಗೆ ವಿಶೇಷ ರೈಲು ಓಡಾಟ ಕುರಿತು ಸುದ್ದಿ ಪ್ರಸಾರ ಮಾಡಿದ ಮರಾಠಿ ಸುದ್ದಿ ವಾಹಿನಿ ಪತ್ರಕರ್ತ ರಾಹುಲ್ ಕುಲಕರ್ಣಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ,'' ಎಂದು ಮುಂಬೈ ಡಿಸಿಪಿ ಪ್ರಣಯ ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ 'newslaundry' ಅದಾಗಲೇ ಪತ್ರಕರ್ತ ಕುಲಕರ್ಣಿಯ ಜತೆ ಮಾತನಾಡಿದ್ದು, ಅವರ ಪ್ರಕಾರ ಅವರ ವರದಿ ಬೆಳಿಗ್ಗೆ 9 ಗಂಟೆಗೆ ಪ್ರಧಾನಿಯ ಭಾಷಣಕ್ಕಿಂತ ಬಹಳ ಮೊದಲೇ ಪ್ರಸಾರಗೊಂಡಿತ್ತು ಹಾಗೂ "11.30ರ ವರದಿ ಬಗ್ಗೆ ತಿಳಿದಿಲ್ಲ,'' ಎಂದು ಅವರು ಹೇಳಿದ್ದಾರೆ.
"ನನ್ನ ವರದಿಯು ರೈಲ್ವೆ ಸಚಿವಾಲಯದ ಮುಖ್ಯ ಕಮರ್ಷಿಯಲ್ ಮ್ಯಾನೇಜರ್ ಅವರ ಕಚೇರಿಯ ಸುತ್ತೋಲೆಯ ಆಧರಿತವಾಗಿತ್ತು,'' ಎಂದೂ ಅವರು ಹೇಳಿದ್ದಾರೆ.
ಈ ನಿರ್ದಿಷ್ಟ ಸುತ್ತೋಲೆಯನ್ನು ಎಪ್ರಿಲ್ 13ರಂದು ಮುಖ್ಯ ಕಮರ್ಷಿಯಲ್ ಮ್ಯಾನೇಜರ್ ಅವರ ತೆಲಂಗಾಣ ಕಚೇರಿ ಹೊರಡಿಸಿತ್ತು. ರೈಲು ಸೇವೆಗಳ ಪುನರಾರಂಭದ ಕುರಿತಂತೆ ಅದರಲ್ಲಿ ಹೇಳಲಾಗಿದೆಯಾದರೂ ಯಾವುದೇ ನಿರ್ದಿಷ್ಟ ಸಮಯ ಮಿತಿ ಅಥವಾ ದಿನಾಂಕವನ್ನು ಅದರಲ್ಲಿ ನಮೂದಿಸಲಾಗಿಲ್ಲ.
ಕುಲಕರ್ಣಿ ವಿರುದ್ಧ ಐಪಿಸಿ ಸೆಕ್ಷನ್ 269, 270, 505 (ಬಿ), 188 ಹಾಗೂ 117 ಅನ್ವಯ ಹಾಗೂ ಸಾಂಕ್ರಾಮಿಕ ರೋಗಗಳ ಕಾಯಿದೆಯ ಸೆಕ್ಷನ್ 3 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವಲಸಿಗ ಕಾರ್ಮಿಕರನ್ನು ಅವರ ಮನೆಗಳಿಗೆ ತೆರಳಲು ಏರ್ಪಾಟು ಮಾಡದೇ ಇದ್ದರೆ ದೇಶವ್ಯಾಪಿ ಪ್ರತಿಭಟನೆಗಳಿಗೆ ಸಾಮಾಜಿಕ ಜಾಲತಾಣ ಪೋಸ್ಟ್ ಗಳ ಮೂಲಕ ಕರೆ ನೀಡಿದ ನವಿ ಮುಂಬೈ ನಿವಾಸಿಯೊಬ್ಬನ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
आज दोपहर @abpmajhatv की इस खबर के बाद शायद बान्द्रा में भीड़ जुटी हो इस से इनकार नही किया जा सकता।#लॉकडॉउन pic.twitter.com/6El5SH1jxE
— Nawab Malik نواب ملک नवाब मलिक (@nawabmalikncp) April 14, 2020
— Rahul Kulkarni (@RahulAsks) April 14, 2020







