ಜನಧನ್ ಖಾತೆ ಕುರಿತ ವದಂತಿಗೆ ಕಿವಿಗೊಡಬೇಡಿ: ದ.ಕ. ಜಿಲ್ಲಾಧಿಕಾರಿ ಸಿಂಧೂ
ಮಂಗಳೂರು, ಎ.15: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ನಲ್ಲಿ ಜನಧನ ಮಹಿಳಾ ಖಾತೆದಾರರಿಗೆ ಪ್ರತಿ ತಿಂಗಳು ತಲಾ 500 ರೂ.ನಂತೆ 3 ತಿಂಗಳು ಕೇಂದ್ರ ಸರಕಾರದಿಂದ ಹಣ ಜಮೆ ಆಗಲಿದೆ. ಈ ಕುರಿತಾದ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಬ್ಯಾಂಕ್ಗಳಿಗೆ ಜಮೆ ಆಗಿರುವ ಹಣವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ. ಅದು ಖಾತೆಯಲ್ಲೇ ಉಳಿಯಲಿದ್ದು, ಅದನ್ನು ಡ್ರಾ ಮಾಡಿಕೊಳ್ಳಲು ಕೂಡ ಯಾವುದೇ ಕಾಲಮಿತಿ ಇಲ್ಲ. ಹಾಗಾಗಿ ಯಾವುದೇ ವದಂತಿಗೆ ಕಿವಿಗೊಡಬೇಡಿ. ನಿಮಗೆ ಆವಶ್ಯಕತೆ ಇದ್ದಲ್ಲಿ ಮಾತ್ರ ಹಣವನ್ನು ಪಡೆಯಬಹುದು ಎಂದು ಡಿಸಿ ತಿಳಿಸಿದ್ದಾರೆ.
ಕೇಂದ್ರ ಕಾರ್ಮಿಕ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯು ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಕೂಳೂರಿನಲ್ಲಿ ಕೆಲವು ಕಾರ್ಮಿಕರು ವದಂತಿಯ ಮೇರೆಗೆ ಜಮಾಯಿಸಿದ ಬಗ್ಗೆ ಮಾಹಿತಿ ಇದೆ. ಕಾರ್ಮಿಕರು ಯಾವುದೇ ವದಂತಿಗೆ ಕಿವಿಗೊಡಬಾರದು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.
ಜ್ವರ ಪರೀಕ್ಷೆ: ಜಿಲ್ಲೆಯ ಫೀವರ್ ಕ್ಲೀನಿಕ್ನಲ್ಲಿ ಬುಧವಾರ 75 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಯಾರಿಗೂ ಕೊರೋನ ರೋಗದ ಲಕ್ಷಣ ಕಂಡು ಬಂದಿಲ್ಲ ಎಂದು ಡಿಸಿ ತಿಳಿಸಿದ್ದಾರೆ.