ಲಾಕ್ಡೌನ್: ಅಂಚೆ ಮೂಲಕ ವಿವಿಧ ಸೌಲಭ್ಯ, ಔಷಧ ರವಾನೆ
ಮಂಗಳೂರು, ಎ.15: ಕರೋನ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ಡೌನ್ ಅವಧಿಯಲ್ಲಿ ಅಂಚೆ ಇಲಾಖೆಯು ಅಗತ್ಯ ಸೇವೆಗಳನ್ನು ನೀಡುತ್ತಿದೆ. ಮಂಗಳೂರು ವಿಭಾಗದಲ್ಲಿ ಎಲ್ಲಾ ಇಲಾಖಾ ಮತ್ತು ಶಾಖಾ ಅಂಚೆ ಕಚೇರಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಾರಂಭಿಸಿವೆ.
ಔಷಧ ರವಾನೆ: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಊರಿನಿಂದ ಅಂಚೆ ಮೂಲಕ ಔಷಧ ಮತ್ತು ತುರ್ತು ಅಗತ್ಯದ ವಸ್ತುಗಳನ್ನು ರವಾನಿಸಬಹುದಾಗಿದೆ. ಸಮೀಪದ ಜಿಲ್ಲೆಗಳಾದ ಶಿವಮೊಗ್ಗ, ಮೈಸೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಯಿಂದ ಔಷಧ ಮತ್ತು ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ತಲುಪಿಸಲು ಎಲ್ಲಾ ವ್ಯವಸ್ಥೆಗಳ್ನು ಮಾಡಲಾಗುತ್ತಿದೆ.
ಆದರೆ ನೆರೆಯ ಹಾಗೂ ಇತರ ರಾಜ್ಯಗಳಿಗೆ ಮಂಗಳೂರಿನಿಂದ ನೇರ ಸಾಗಾಣಿಕೆ ಇಲ್ಲದಿರುವುದರಿಂದ ಮಂಗಳೂರಿನಿಂದ ಬೆಂಗಳೂರು ಮೂಲಕ ಕಳುಹಿಸಲಾಗುತ್ತಿದೆ. ಇದರಿಂದ ವಿಳಂಬವಾಗುವ ಸಾಧ್ಯತೆ ಇದೆ. ಇವುಗಳನ್ನು ರವಾನಿಸುವಾಗ ಅಂಚೆ ಕಚೇರಿಗೆ ತುರ್ತು ಅಗತ್ಯದ ಬಗ್ಗೆ ತಿಳಿಸಿದರೆ ಶೀಘ್ರ ರವಾನೆ ಹಾಗೂ ಬಟವಾಡೆಯ ವ್ಯವಸ್ಥೆಗಳನ್ನು ಮಾಡಲು ಸಹಾಯಕವಾಗುತ್ತದೆ.
ತಂತ್ರಜ್ಞಾನ ಆಧಾರಿತ ಇ-ಮನಿಯಾರ್ಡರ್ ಸೇವೆ: ಲಾಕ್ಡೌನ್ ಅವಧಿಯಲ್ಲಿ ಕುಟುಂಬಿಕರಿಗೆ ಹಣ ಕಳಿಸಲು ಕೂಡ ಅಂಚೆ ಇಲಾಖೆಯು ವಿಶೇಷವಾದ ಇ-ಮನಿಯಾರ್ಡರ್ ಸೇವೆ ಕಲ್ಪಿಸಿದೆ. ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿದ್ದರೂ ಈ ಸೇವೆಯ ಮೇಲೆ ಪರಿಣಾಮ ಬೀರುವುದಿಲ್ಲ. ಇಲೆಕ್ಟ್ರಾನಿಕ್ ತಂತ್ರಜ್ಞಾನದ ಮೂಲಕ ಪಿನ್ಕೋಡ್ ಆಧಾರಿತವಾಗಿ ಕಳುಹಿಸುವ ವ್ಯವಸ್ಥೆ ಇರುವುದರಿಂದ ದೇಶದ ಯಾವುದೇ ಭಾಗಕ್ಕೂ ಇ ಮನಿಯಾರ್ಡರ್ ಮೂಲಕ ಹಣವನ್ನು ಸಾರ್ವಜನಿಕರು ಅಂಚೆ ಕಚೇರಿಗಳಿಂದ ಕಳುಹಿಸಬಹುದಾಗಿದೆ.
ಸಾಮಾಜಿಕ ಭದ್ರತೆ ಯೋಜನೆಗಳ ಹಣ ಪಾವತಿ: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿ ಇ-ಮನಿಯಾರ್ಡರ್ ಹಾಗೂ ಅಂಚೆ ಉಳಿತಾಯ ಖಾತೆಗಳ ಮೂಲಕ ಸಂಬಂಧಿಸಿದ ಫಲಾನುಭವಿಗಳಿಗೆ ಹಣವು ಅಂಚೆ ಕಚೇರಿಗಳಲ್ಲಿ ಪಾವತಿಯಾಗುತ್ತಿದೆ. ಕಳೆದೊಂದು ವಾರದಲ್ಲಿ ಸುಮಾರು 5,500 ಫಲಾನುಭವಿಗಳಿಗೆ ಇ-ಮನಿಯಾರ್ಡರ್ಗಳನ್ನು ಮಂಗಳೂರು ವಿಭಾಗದಲ್ಲಿ ವಿತರಿಸಲಾಗಿದೆ. ಈ ವಾರ ಸುಮಾರು 24,000 ಫಲಾನುಭವಿಗಳಿಗೆ ಇ-ಮನಿಯಾರ್ಡರ್ಗಳನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಿದ್ಯುತ್ ಬಿಲ್ ಪಾವತಿ: ಮಂಗಳೂರು ಅಂಚೆ ವಿಭಾಗದ ಎಲ್ಲಾ ಇಲಾಖಾ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ವಿದ್ಯುತ್ ಬಿಲ್ ಪಾವತಿ ಸೇವೆಯು ಲಭ್ಯವಿದ್ದು, ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಲಾಕ್ಡೌನ್ ಅವಧಿಯಲ್ಲಿ ಮೆಸ್ಕಾಂ ಬಿಲ್ ಬಾರದಿದ್ದರೂ ಕೂಡ ಗ್ರಾಹಕರು ತಮ್ಮ ಆರ್.ಆರ್. ನಂಬರ್ ಹಾಗೂ ಮೆಸ್ಕಾಂ ಸಬ್ ಡಿವಿಜನ್ ಮಾಹಿತಿಯನ್ನು ಅಂಚೆ ಕಚೇರಿಯಲ್ಲಿ ನೀಡಿ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ.
ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್: ಲಾಕ್ಡೌನ್ ಅವಧಿಯಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿರುವುದರಿಂದ ಮೊಬೈಲ್/ಡಿಟಿಎಚ್ ರೀಚಾರ್ಜ್ ಸೌಲಭ್ಯಗಳು ಕೂಡ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯ ಮೂಲಕ ಗ್ರಾಹಕರು ಸಮೀಪದ ಅಂಚೆ ಕಚೇರಿಯಲ್ಲಿ ಮೊಬೈಲ್/ಡಿಟಿಎಚ್ ರೀಚಾರ್ಜ್ನ್ನು ಮಾಡಬಹುದಾಗಿದೆ. ಅಲ್ಲದೆ ಮೊಬೈಲ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ವ್ಯವಹಾರದ ಸಂದರ್ಭ ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ಕರೋನ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲಾ ಅಂಚೆ ಕಚೇರಿಗಳಲ್ಲೂ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಅಗತ್ಯ ಅಂಚೆ ಸೇವೆ ನೀಡಲಾಗುತ್ತಿದೆ. ಮಾಹಿತಿಗಾಗಿ ಮಂಗಳುರು ವಿಭಾಗೀಯ ಕಚೇರಿಯ ವಾಟ್ಸ್ಆ್ಯಪ್ ಸಂಖ್ಯೆ 9448291072ಕ್ಕೆ ಸಂದೇಶ ಕಳುಹಿಸಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಇವರ ಪ್ರಕಟನೆ ತಿಳಿಸಿದೆ.







