ಮಂಗಳೂರು: ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕಾಂಗ್ರೆಸ್ ಮನವಿ

ಮಂಗಳೂರು, ಎ.16: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್ಡೌನ್ನಿಂದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ತಲಾ 10 ಕೆ.ಜಿಯಂತೆ ವಿತರಿಸಿದ್ದರೂ ಕೂಡ 4 ಕೆ.ಜಿ ಕಡಿತಗೊಳಿಸಲಾಗಿದೆ. ಅದನ್ನು ಸರಿದೂಗಿಸಲು ಮೇ ತಿಂಗಳಲ್ಲಿ 4 ಕೆ.ಜಿ ಕುಚಲಕ್ಕಿ ನೀಡಬೇಕು ಮತ್ತು ವಿತರಿಸದಿರುವ ಗೋಧಿಯನ್ನು ನೀಡಬೇಕು. ಅಲ್ಲದೆ ಕನಿಷ್ಠ 2 ತಿಂಗಳ ದಿನಸಿ ವಸ್ತುಗಳನ್ನು ಬಡ ಕುಟುಂಬಗಳಿಗೆ ಉಚಿತವಾಗಿ ನೀಡಬೇಕು. ಮೇ ತಿಂಗಳಲ್ಲಿ ಪ್ರತಿ ಎಪಿಲ್ ಕಾರ್ಡ್ಗೆ 15 ಕೆಜಿ ಅಕ್ಕಿ, 2 ಕೆ.ಜಿ. ಗೋಧಿ ಮತ್ತು ತೊಗರಿಬೇಳೆಯನ್ನು ಉಚಿತವಾಗಿ ನೀಡಬೇಕು, ಪ್ರತಿ ಬಿಪಿಎಲ್ ಕಾರ್ಡುದಾರರಿಗೆ 1 ಸಿಲಿಂಡರ್ ಉಚಿತವಾಗಿ ನೀಡಬೇಕು, ಮೂರು ತಿಂಗಳ ಇಎಂಐ ಪಾವತಿಸಲು ಸರಕಾರವು ಸಮಯಾವಕಾಶ ನೀಡಿದ್ದು ಅದರ ಬಡ್ಡಿ ಮನ್ನಾ ಮಾಡಬೇಕು, ಖಾಸಗಿ ಇಎಂಐ ಪಾವತಿಯನ್ನು ಮುಂದೂಡುವಂತೆಯೂ ಅದರ ಮೆಲಿನ ಬಡ್ಡಿಯನ್ನು ಮನ್ನಾ ಮಾಡುವಂತೆಯೂ ಕಾಂಗ್ರೆಸ್ ಮನವಿ ಮಾಡಿದೆ.
ಬೀಡಿ ಕಾರ್ಮಿಕರನ್ನು, ಬುಡಕಟ್ಟು ಜನಾಂಗದವರನ್ನು ಗುರುತಿಸಿ ವಿಶೇಷ ಪ್ಯಾಕೇಜ್ ನೀಡಬೇಕು, ಹೊರಜಿಲ್ಲೆ, ಹೊರ ರಾಜ್ಯದಲ್ಲಿ ಸಿಲುಕಿಕೊಂಡಿರುವ ರಾಜ್ಯದ ನಾಗರಿಕರಿಗೆ ಅವರ ಮನೆ ಸೇರುವ ವ್ಯವಸ್ಥೆಯನ್ನು ಸರಕಾರ ಮಾಡಿಕೊಡಬೇಕು. ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಆ ರಾಜ್ಯದ ಸರಕಾರಗಳು ದಿನಬಳಕೆಯ ವಸ್ತುಗಳನ್ನು ನೀಡುವಂತೆ ಸೂಚಿಸಬೇಕು ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮನವಿ ಮಾಡಿದ್ದಾರೆ.





