ತಬ್ಲೀಗಿ ಜಮಾಅತ್ ಕುರಿತು ಸುಳ್ಳು ಫೇಸ್ಬುಕ್ ಪೋಸ್ಟ್: ಹರ್ಯಾಣ ಪೊಲೀಸರಿಂದ ಆರೋಪಿಯ ಬಂಧನ
ಚಂಡಿಗಡ,ಎ.16: ತಬ್ಲೀಗಿ ಜಮಾಅತ್ನ ಇಬ್ಬರು ಸದಸ್ಯರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆಂಬ ಸುಳ್ಳುಸುದ್ದಿಯನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಪ್ರತೀಕ ಭಾರದ್ವಾಜ್ ಎಂಬಾತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಹರ್ಯಾಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತಬ್ಲೀಗಿ ಜಮಾಅತ್ ಕುರಿತು ಸುಳ್ಳು ಸುದ್ದಿಗಳನ್ನು ಪ್ರಸಾರಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ತೆಗಳುವ ಭಾರತೀಯ ಟಿವಿ ವಾಹಿನಿಗಳ ಅಭಿಯಾನದ ನಡುವೆಯೇ ಹರ್ಯಾಣ ಪೊಲೀಸರು ಈ ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ. ಇತ್ತೀಚಿಗೆ ಉತ್ತರ ಪ್ರದೇಶ ಪೊಲೀಸ್ ಮತ್ತು ಅರುಣಾಚಲ ಪ್ರದೇಶದ ಪ್ರಚಾರ ಇಲಾಖೆ ಝೀ ನ್ಯೂಸ್ ಮತ್ತು ಎಎನ್ಐ ಸುದ್ದಿಸಂಸ್ಥೆಯ ಸುಳ್ಳು ಸುದ್ದಿಗಳನ್ನು ಟೀಕಿಸಿದ್ದವು.
ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರು ಇತ್ತೀಚಿಗೆ ತಬ್ಲೀಗಿ ಜಮಾಅತ್ ಕುರಿತು ತನ್ನ ಪ್ರಶಂಸಾರ್ಹ ನಿಲುವಿಗಾಗಿ ಹೊಗಳಿಕೆಗೆ ಪಾತ್ರರಾಗಿದ್ದರು. ತಬ್ಲೀಗಿ ಸಮಾವೇಶವು ನಿಯಮಿತವಾಗಿ ನಡೆಯುವ ಕಾರ್ಯಕ್ರಮವಾಗಿರುವುದರಿಂದ ಧಾರ್ಮಿಕ ಸಂಘಟನೆಯನ್ನು ದೂರುವುದು ತಪ್ಪಾಗುತ್ತದೆ ಎಂದು ಅವರು ಹೇಳಿದ್ದರು. ಆದರೂ,ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪಾಲ್ಗೊಂಡವರು ಮುಂದೆ ಬಂದು ಕೊರೋನ ವೈರಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಆವರು ಆಗ್ರಹಿಸಿದ್ದರು.