ಎಲ್ಲಾ ಸಣ್ಣ ಉದ್ಯಮಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ
ಉಡುಪಿ, ಎ.16: ಕೇಂದ್ರ ಸರಕಾರ ಮೇ 3ರವರೆಗೆ ಲಾಕ್ಡೌನ್ ಘೋಷಿ ಸಿರುವುದರಿಂದ ಗೇರುಬೀಜ ಸಂಸ್ಕರಣ ಘಟಕಗಳಿಗೆ ಈಗಾಗಲೇ ನೀಡಿರುವಂತೆ ಉಳಿದೆಲ್ಲಾ ಸಣ್ಣ ಉದ್ಯಮಗಳಿಗೂ ಲಾಕ್ಡೌನ್ನಿಂದ ವಿನಾಯಿತಿಯನ್ನು ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇದೇ ರೀತಿಯ ವಿನಾಯಿತಿಯನ್ನು ಸಣ್ಮ ಕೈಗಾರಿಕೆಗಳು, ಕೃಷಿ ಸಂಬಂಧಿತ ಗುಡಿ ಕೈಗಾರಿಕೆಗಳು ಹಾಗೂ ಎಲ್ಲಾ ರೀತಿಯ ಸರಕು ಸಾಗಾಟಕ್ಕೆ ಕ್ರಯ ವಿಕ್ರಯಕ್ಕೆ ಅಲ್ಲದೇ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲಾ ಉದ್ಯಮಗಳಿಗೂ ನೀಡುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೀನುಗಾರಿಕೆ, ಕೃಷಿ ಸಂಬಂಧಿತ ಸಣ್ಣ, ಮದ್ಯಮ ಕೈಗಾರಿಕೆಗಳ ವ್ಯವಹಾರವು ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವುದರಿಂದ, ಅನಂತರ ಮಳೆಗಾಲ ಪ್ರಾರಂಭಗೊಂಡು ವರ್ಷದ ಆದಾಯದಿಂದ ವಂಚಿತವಾಗಿ ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರ ಬದುಕು ದುಸ್ತರವಾಗುವುದು ಎಂದವರು ವಿವರಿಸಿದ್ದಾರೆ.
ಈಗಾಗಲೇ ಕಳೆದ ಋತುವಿನಲ್ಲಿ ಮೀನಿನ ಕ್ಷಾಮ ನಿಮಿತ್ತ ನಷ್ಟದಲ್ಲಿರುವ ಮೀನುಗಾರಿಕಾ ಉದ್ಯಮವಲ್ಲದೇ, ಪ್ರವಾಹ ನಿಮಿತ್ತ ಕೃಷಿ ಕ್ಷೇತ್ರದಲ್ಲಿ ತೊಡಗಿಸಿ ಕೊಂಡ ರೈತರು ನಷ್ಟ ಅನುಭವಿಸಿದ್ದಾರೆ. ಆದುದರಿಂದ ಈ ಬಗ್ಗೆ ಈಗಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಈ ಜನ ಬೀದಿಗೆ ಬೀಳುವುದು ಖಚಿತ ಎಂದು ಅಶೋಕ್ ಕುಮಾರ್ ಕೊಡವೂರು ಅಭಿಪ್ರಾಯ ಪಟ್ಟಿದ್ದಾರೆ.







