ಮಂಗಳೂರು: ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ ಆರೋಗ್ಯ ಇಲಾಖೆ

ಮಂಗಳೂರು, ಎ.16: ನೋಂದಣಿಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ವೈದ್ಯರ ಕ್ಲಿನಿಕ್ ಮೇಲೆ ಗುರುವಾರ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ಗೆ ಬೀಗ ಜಡಿದಿದ್ದಾರೆ.
ಸುರತ್ಕಲ್ ನಲ್ಲಿದ್ದ ಶ್ರೀ ರಾಘವೇಂದ್ರ ಕ್ಲಿನಿಕ್ನ ನೋಂದಣಿಯು 2017ರಲ್ಲೇ ಮುಕ್ತಾಯವಾಗಿದೆ. ಆದರೂ ನವೀಕರಣಗೊಳಿಸದೆ ಕ್ಲಿನಿಕ್ನ್ನು ಕಾರ್ಯಾಚರಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ.ಸಿಖಂದರ್ ಪಾಶಾ ಕ್ಲಿನಿಕ್ಗೆ ದಾಳಿ ಮಾಡಿ ಕ್ಲಿನಿಕನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ.
ಜಿಲ್ಲೆಯ ಕೆಲವು ಆಸ್ಪತ್ರೆಗಳು, ಕ್ಲಿನಿಕ್, ಲ್ಯಾಬೋರೋಟರಿ, ಹೋಮಿಯೋಪಥಿ ಕ್ಲಿನಿಕ್, ಆಯುಷ್ ಕ್ಲಿನಿಕ್ ಹಾಗೂ ಇತರ ಸಂಸ್ಥೆಗಳು ಕೆಪಿಎಂಇ ಅಡಿ ನೋಂದಣಿಯಾಗದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಕೆಲವು ಆಸ್ಪತ್ರೆಗಳು, ಕ್ಲಿನಿಕ್ಗಳು ನೋಂದಣಿಗೊಂಡು 5 ವರ್ಷ ಕಳೆದರೂ ನವೀಕರಣಗೊಳಿಸದೆ ಕಾರ್ಯಾಚರಿಸುತ್ತಿದೆ. ಹಾಗಾಗಿ ನೋಂದಣಿಗೊಳ್ಳದ ಆಸ್ಪತ್ರೆ, ಕ್ಲಿನಿಕ್ಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಇಲ್ಲದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.







