ಕೊರೋನ: ಕೇಂದ್ರ ಪರಿಹಾರ ನಿಧಿಗೆ ಅದಮಾರು ಮಠದಿಂದ ದೇಣಿಗೆ

ಉಡುಪಿ, ಎ.17: ಪರ್ಯಾಯ ಶ್ರೀಅದಮಾರು ಮಠದ ವತಿಯಿಂದ ಕೊರೋನ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನ ಮಂತ್ರಿಗಳ ಕೇಂದ್ರ ಪರಿಹಾರ ನಿಧಿಗೆ 55,55,555 ರೂ.ಗಳ ದೇಣಿಗೆ ಚೆಕ್ನ್ನು, ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಪರ್ಯಾಯ ಶ್ರೀಗಳಾದ ಶ್ರೀಈಶಪ್ರಿಯ ಸ್ವಾಮೀಜಿ ಇವರು ಶುಕ್ರವಾರ ಶ್ರೀಕೃಷ್ಣ ಮಠದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಮತ್ತು ಉಡುಪಿಯ ಶಾಸಕ ಕೆ. ರಘುಪತಿ ಭಟ್ ಇವರ ಸಮ್ಮುಖ ದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಇವರಿಗೆ ಹಸ್ತಾಂತರಿಸಿದರು.
ಕಾಲ ಕಾಲಕ್ಕೆ ಮಳೆ ಬರಬೇಕು. ಮಳೆಯಿಂದ ಬೆಳೆ ಬೆಳೆಯಬೇಕು.ಆದರೆ ಪ್ರಸ್ತುತ ಯಾರೋ ಮಾಡಿದ ತಪ್ಪಿನಿಂದ ವಿಶ್ವದ ಪ್ರತಿಯೊಬ್ಬರೂ ತಲೆ ಕೊಡುವ ಪ್ರಸಂಗ ಬಂದು ಜಗತ್ತಿಗೆ ದೊಡ್ಡ ಅನಾಹುತ ಬಂದಿದೆ.ನಮ್ಮ ದೇಶದ ಪ್ರಧಾನಿಗಳು ಸಂಕಷ್ಟದಲ್ಲಿರುವವರ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಈ ನಿಟ್ಟಿನಲ್ಲಿ ನಾವು ನಮ್ಮ ಮಠದಿಂದ ದೇವರಲ್ಲಿ ಪ್ರಾರ್ಥಿಸಿ ಮೊತ್ತವನ್ನು ಪ್ರಸಾದ ರೂಪವಾಗಿ ನೀಡಿದ್ದೇವೆ. ಆದಷ್ಟು ಬೇಗ ಎಲ್ಲರೂ ಆರೋಗ್ಯವಂತರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಅದಮಾರು ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥರು ಸಂದೇಶ ನೀಡಿದರು.
ದೇಶದ ಈ ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಯಾವುದೇ ಮೂಲಗಳಿಂದ ತೆರಿಗೆ ರೂಪದ ಆದಾಯವಿರುವುದಿಲ್ಲ. ಆದರೆ ವಿವಿಧ ಇಲಾಖೆಗಳ ಖರ್ಚು ಸಾರ್ವಜನಿಕರ ಆರೋಗ್ಯದ ಖರ್ಚುಗಳು ಇದ್ದೆ ಇರುತ್ತವೆ. ಇದಕ್ಕೆ ನಾವು ವಾರದಲ್ಲಿ ಮೂರೂ ಹೊತ್ತಿನ ಊಟವನ್ನು ಬಿಟ್ಟು ಅದರ ಉಳಿತಾಯವನ್ನು ಕಷ್ಟದಲ್ಲಿರುವವರಿಗೆ ಹಂಚಬಹುದು.ಎಲ್ಲರ ಪರಿಶ್ರಮದಿಂದ ವಿಶ್ವದಲ್ಲಿಯೇ ಭಾರತ ದೇಶವು ಪ್ರಥಮ ಕೊರೋನ ಮುಕ್ತ ದೇಶವಾಗಿ ವಿಶ್ವಗುರುವಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ಮೊದಲು ಅದಮಾರು ಮಠದ ವತಿಯಿಂದ 2,00,000 ರೂ.ಗಳನ್ನು ಪ್ರಧಾನ ಮಂತ್ರಿಯವರ ಕೊರೋನ ಪರಿಹಾರ ನಿಧಿಗೆ ನೀಡಲಾಗಿತ್ತು. ಅಲ್ಲದೇ ಪರ್ಯಾಯ ಅದಮಾರು ಮಠದ ವತಿಯಿಂದ ದಿನವಹಿ ಸಾಮಗ್ರಿಗಳ 1000 ಕಿಟ್ಗಳನ್ನೂ ಹಾಗೂ ಅದಮಾರು ಮಠದ ಆಡಳಿತ ದಲ್ಲಿರುವ ಕುಂಜಾರುಗಿರಿ ಶ್ರೀದುರ್ಗಾದೇವಸ್ಥಾನದಿಂದ 250 ಕಿಟ್ ಗಳನ್ನೂ ಅರ್ಹರಿಗೆ ವಿತರಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಶಾಸಕ ಕೆ.ರಘುಪತಿ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಮಠದ ಆಡಳಿತ ವರ್ಗದವರು ಉಪಸ್ಥಿತರಿದ್ದರು.







