ಮೂರನೆ ಸೋಂಕಿತನ ಎರಡನೆ ವರದಿಯೂ ನೆಗೆಟಿವ್: ಡಿಸಿ ಜಗದೀಶ್
ಉಡುಪಿ, ಎ.17: ಉಡುಪಿ ಜಿಲ್ಲೆಯ ಮೂರನೆ ಕೊರೋನ ಸೋಂಕಿತನ ಎರಡು ಮಾದರಿ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದ್ದು, ಮೂರನೆ ಮಾದರಿಯನ್ನು ಎ.16ರಂದು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆ ವರದಿ ನಾಳೆ ಬರುವ ನಿರೀಕ್ಷೆ ಇದೆ. ಈ ವರದಿ ನೆಗೆಟಿವ್ ಬಂದರೆ ಇವರನ್ನು ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಟ್ಕಳ ಕೊರೋನ ಸೋಂಕಿತ ಗರ್ಭಿಣಿಗೆ ಚಿಕಿತ್ಸೆ ನೀಡುವುದು ನಮಗೆ ದೊಡ್ಡ ಸವಾಲು ಆಗಿತ್ತು. ಅದರಂತೆ ಹೆಚ್ಚಿನ ನಿಗಾ ವಹಿಸಿ ಉತ್ತಮ ಚಿಕಿತ್ಸೆ ನೀಡ ಲಾಗಿತ್ತು. ಇದೀಗ ತಾಯಿ ಮತ್ತು ಗರ್ಭದಲ್ಲಿರುವ ಮಗು ಆರೋಗ್ಯವಾಗಿದ್ದು, ಇವರ ಮಾದರಿ ಪರೀಕ್ಷೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಯ ನಿರೀಕ್ಷೆಯಲ್ಲಿ ಇದ್ದೇವೆ. ಎರಡು ವರದಿ ನೆಗೆಟಿವ್ ಬಂದರೆ ಇವರನ್ನು ಕೂಡ ಡಿಸ್ಚಾರ್ಜ್ ಮಾಡಲಾಗುವುದು ಎಂದರು.
ಒಂದು ಲಕ್ಷ ಮಂದಿಯಲ್ಲಿ ಅತಿ ಹೆಚ್ಚು ಅಂದರೆ 64 ಮಂದಿಯನ್ನು ಪರೀಕ್ಷೆ ಮಾಡಿರುವುದರಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಶಂಕಿತರನ್ನು ಹೆಚ್ಚು ಹೆಚ್ಚು ಪರೀಕ್ಷೆಗೆ ಒಳಪಡಿಸಬೇಕೆಂಬ ಸರಕಾರದ ಸೂಚನೆಯಂತೆ ದಿನಕ್ಕೆ 100- 150 ಮಾದರಿಗಳನ್ನು ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಿಕೊಡ ಲಾಗುತ್ತಿದೆ. 28 ದಿನಗಳವರೆಗೆ ಕೊರೋನ ವೈರಸ್ ಪಾಸಿಟಿವ್ ಪ್ರಕರಣ ವರದಿ ಯಾಗದಿದ್ದರೆ ನಮ್ಮ ಜಿಲ್ಲೆ ಕಿತ್ತಲೆಯಿಂದ ಹಸಿರು ವಲಯಕ್ಕೆ ಬರಲಿದೆ. ಈ ಬಗ್ಗೆ ಈಗಾಗಲೇ 18 ದಿನ ಪೂರೈಸಿದ್ದೇವೆ ಎಂದು ಅವರು ಹೇಳಿದರು.
ತುರ್ತು ಚಿಕಿತ್ಸೆ ಹಾಗೂ ಸಂಬಂಧಿಕರು ತೀರಿ ಹೋದರೆ ಮಾತ್ರ ಗಡಿಗಳಲ್ಲಿ ಪ್ರವೇಶ ನೀಡಲಾಗುತ್ತದೆ. ತುರ್ತು ಪಾಸ್ಗಳನ್ನು ಜಿಲ್ಲಾಧಿಕಾರಿ ಕಚೇರಿ ಯಿಂದಲೇ ಮಂಜೂರು ಮಾಡಲಾಗುತ್ತದೆ. ಇದೀಗ ತಹಶೀಲ್ದಾರ್ಗೆ ಪಾಸ್ ಅರ್ಜಿಗಳನ್ನು ಸ್ವೀಕರಿಸುವ ಅಧಿಕಾರವನ್ನು ನೀಡಲಾಗಿದೆ. ಆನ್ಲೈನ್ ಮೂಲಕ ಎಂಟ್ರಿ ಮಾಡಿದ ಅರ್ಜಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ತಕ್ಷಣವೇ ಮಂಜೂರಾತಿ ನೀಡಲಾಗುತ್ತದೆ. ಅದನ್ನು ನಂತರ ಆಯಾ ತಾಲೂಕು ಕಚೇರಿ ಗಳಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.







