ಮಣಿಪಾಲ: ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಕ್ಕೆ ಸಚಿವರಲ್ಲಿ ಚರ್ಚೆ ; ಶೋಭಾ ಕರಂದ್ಲಾಜೆ

ಉಡುಪಿ, ಎ.17: ಮಣಿಪಾಲದ ಕೆಎಂಸಿಯಲ್ಲಿ ಕೋವಿಡ್-19 ಸ್ಯಾಂಪಲ್ ಪರೀಕ್ಷೆಗೆ ಪ್ರಯೋಗಾಲಯವನ್ನು ತೆರೆಯುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ರೊಂದಿಗೆ ಚರ್ಚಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ತೆಗೆದುಕೊಂಡಿರುವ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ ಪರೀಕ್ಷಾ ಲ್ಯಾಬ್ ಆರಂಭಿಸು ವುದರಿಂದ ತ್ವರಿತವಾಗಿ, ಕೋವಿಡ್ ಪರೀಕ್ಷಾ ಫಲಿತಾಂಶ ಪಡೆಯಲು ಸಾಧ್ಯ ವಾಗಲಿದೆ. ಅಲ್ಲದೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆ ನಡೆಸಲು ಸಹ ಸಾಧ್ಯವಾಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಅನುಮತಿಗೆ ಪ್ರಯತ್ನಿಸುವುದಾಗಿ ಶೋಭಾ ತಿಳಿಸಿದರು.
ಮಣಿಪಾಲ ಕೆಎಂಸಿಗೆ ತುರ್ತು ಚಿಕಿತ್ಸೆಗೆ ಆಗಮಿಸುವ ಹೊರಜಿಲ್ಲೆಗಳ ರೋಗಿಗಳಿಗೆ ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಹಾಗೂ ರೋಗಿಗಳ ಜೊತೆಯಲ್ಲಿ ಕೇವಲ ಒಬ್ಬರು ಅಥವಾ ಅನಿವಾರ್ಯದಲ್ಲಿ ಗರಿಷ್ಠ ಇಬ್ಬರು ಸಹಾಯಕರು ಮಾತ್ರ ಬರುವ ಕುರಿತಂತೆ ನಿಯಮ ಮಾಡು ವಂತೆ ಅವರು ಸಲಹೆ ನೀಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಕೊರತೆಯಾಗದಂತೆ, ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದೆ ಸೂಚಿಸಿದರು. ಹೂವಿನ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಶಾಸಕ ರಘುಪತಿ ಭಟ್ ಹಾಗೂ ಮರಣ ಸಂದರ್ಭದಲ್ಲಿ ಪ್ರಯಾಣಿಸಲು ಶೀಘ್ರದಲ್ಲಿ ಅನುಮತಿ ನೀಡುವಂತೆ ಶಾಸಕ ಲಾಲಾಜಿ ಮೆಂಡನ್ ಕೋರಿದರು.
ಜಿಲ್ಲೆಯಲ್ಲಿ ಸಂಕಷ್ಠದಲ್ಲಿರುವ ಸಾರ್ವಜನಿಕರನ್ನು ಜಿಲ್ಲಾಡಳಿದ ಮೂಲಕ ಗುರುತಿಸಿ ಈಗಾಗಲೇ ಮೊದಲ ಹಂತದಲ್ಲಿ 5,388 ಆಹಾರದ ಕಿಟ್ ಗಳನ್ನು ತರಿಸಲಾಗಿದ್ದು, 658 ನಿರಾಶ್ರಿತರಿಗೆ ಶೆಲ್ಟೆರ್ ರೂಂಗಳಲ್ಲಿ ಅಗತ್ಯ ವ್ಯವಸ್ಥೆ ಒದಗಿಸಲಾಗಿದೆ. ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ. 2ನೇ ಹಂತದಲ್ಲಿ ಈಗಾಗಲೇ 5000 ಮಂದಿಗೆ ಜಿಲ್ಲೆಯ ವಿವಿಧ ದೇವಾಲಯಗಳ ಮೂಲಕ ಆಹಾರದ ಕಿಟ್ ತರಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಸಂಬಂಧಪಟ್ಟ ತಹಶೀಲ್ದಾರ್ಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿವರಿಸಿದರು.
ಜಿಲ್ಲೆಯಲ್ಲಿ ಔಷಧಗಳ ದಾಸ್ತಾನು ಸಾಕಷ್ಟು ಇದ್ದು, ಕೊರತೆ ಇಲ್ಲ. ಇನ್ಫೋಸಿಸ್, ಡಾ.ಜಿ.ಶಂಕರ್ ಸೇರಿದಂತೆ ದಾನಿಗಳ ನೆರವಿನಿಂದ ವೈದ್ಯಕೀಯ ಸಲಕರಣೆಗಳು ನೆರವು ದೊರೆತಿದೆ, ಪಾರ್ಲೆ ಜಿಯಿಂದ 4 ಲಕ್ಷ ಬಿಸ್ಕೆಟ್ ಪ್ಯಾಕ್ ಗಳ ಪೂರೈಕೆ ಸಹ ಬರಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ದಿನನಿತ್ಯದ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 7ರಿಂದ 11ರವರೆಗೆ ಸಮಯ ನಿಗದಿಪಡಿಸಿದ್ದು, ಈ ಅವಧಿಯಲ್ಲಿ ಹೂ ಮಾರಾಟ ಮಾಡಬಹುದಾಗಿದೆ. ಹಾಗೂ ಮರಣದ ಸಂದರ್ಭದಲ್ಲಿ ಪ್ರಯಾಣಕ್ಕೆ ಶೀಘ್ರ ಅನುಮತಿಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಳೆದ 19 ದಿನಗಳಿಂದ ಕೊರೋನಾ ಪಾಸಿಟಿವ್ ಕಂಡು ಬಂದಿಲ್ಲ. ಇದು 28 ದಿನಗಳಾದಲ್ಲಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬರಲಿದೆ. ಜಿಲ್ಲೆಯ ಒಳಗೆ ಕೊರೋನ ಕಂಡು ಬರುವ ಸಾಧ್ಯತೆಗಳ ಕಡಿಮೆ ಇದ್ದು, ಹೊರಗಿನಿಂದ ಮಾತ್ರ ಬರುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯ ಗಡಿಗಳನ್ನು ಅತ್ಯಂತ ಬಿಗಿಗೊಳಿಸಲಾಗಿದೆ. ಜಿಲ್ಲೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವವರ ಯಾವುದೇ ಒತ್ತಡಗಳಿಗೆ, ಜಿಲ್ಲೆಯ ನಾಗರಿಕರ ಆರೋಗ್ಯ ದೃಷ್ಟಿಯಿಂದ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಮಳೆಗಾಲದ ಕಾರಣದಿಂದ ತುರ್ತಾಗಿ ನಡೆಯಬೇಕಿದ್ದ ಸೇತುವೆ ನಿರ್ಮಾಣ ಕಾಮಗಾರಿಗಳ ಅರಂಭಕ್ಕೆ ಅನುಮತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಿಂದ ಪರೀಕ್ಷೆಗೆ ಕಳುಹಿಸಿದ್ದ 409 ಸ್ಯಾಂಪಲ್ಗಳಲ್ಲಿ ಈವರೆಗೆ 394 ವರದಿಗಳು ನೆಗೆಟಿವ್ ಬಂದಿದ್ದು, 15 ಮಾತ್ರ ಬಾಕಿ ಇವೆ. ಒಬ್ಬ ಕೊರೋನಾ ರೋಗಿ ಮಾತ್ರ ಜಿಲ್ಲೆಯಲ್ಲಿದ್ದು, ಭಟ್ಕಳದ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಇದೆ ಎಂದು ಜಿಲ್ಲಾ ಕೊರೋನಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಮಾಹಿತಿ ನೀಡಿದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.







